ಗಂಗಾಧರ ಚಡಚಣ ಹತ್ಯೆಯಲ್ಲಿ ಮತ್ತಷ್ಟು ಪೊಲೀಸರು ಭಾಗಿ?
ವಿಜಯಪುರ, ಜೂನ್ 26 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಈಗ ಬಂಧಿತರಾಗಿರುವ ಆರೋಪಿಗಳ ಜೊತೆ ಇನ್ನೂ ಕೆಲವು ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಧರ್ಮರಾಜ್ ಚಡಚಣ 2017ರ ಅ.30ರಂದು ತೋಟದ ಮನೆಯಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ. ಈ ಎನ್ಕೌಂಟರ್ ಬಳಿಕ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಆತ ನಾಪತ್ತೆಯಾಗಿದ್ದ. ಕೆಲವು ದಿನಗಳ ಹಿಂದೆ ಆತ ಕೊಲೆಯಾದ ಮಾಹಿತಿ ಬಹಿರಂಗವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಗಂಗಾಧರ ಹತ್ಯೆ ಪ್ರಕರಣದ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪೊಲೀಸ್ ಅಧಿಕಾರಿಗಳು ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ತಿಳಿದ ಮೇಲೆ ಚರ್ಚೆ ತೀವ್ರಗೊಂಡಿದೆ.

ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. 4 ತಂಡಗಳನ್ನು ರಚನೆ ಮಾಡಿಕೊಂಡು ಸಿಐಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಗೋಪಾಲ ಹಳ್ಳೂರ, ಪೊಲೀಸ್ ಪೇದೆಗಳಾದ ಸಿದ್ಧಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರನ್ನು ಬಂಧಿಸಲಾಗಿದೆ.
ಗಂಗಾಧರ ಹತ್ಯೆ : ವಿಚಾರಣೆ ವೇಳೆ ಪೊಲೀಸ್ ಪೇದೆಗಳು ನೀಡಿದ ಮಾಹಿತಿಯಂತೆ ಧರ್ಮರಾಜ ಚಡಚಣ ಎನ್ಕೌಂಟರ್ ನಡೆದ ದಿನವೇ ಗಂಗಾಧರ ಚಡಚಣ ಹತ್ಯೆ ನಡೆದಿದೆ. ಪೊಲೀಸ್ ಪೇದೆಗಳೇ ಪಿಎಸ್ಐ ಗೋಪಾಲ್ ಹಳ್ಳೂರ ಅವರ ಕಾರಿನಲ್ಲಿ ಆತನನ್ನು ಕರೆದುಕೊಂಡು ಹೋಗಿ ಹನುಮಂತ ಪೂಜಾರಿ ಅವರಿಗೆ ಒಪ್ಪಿಸಿದ್ದರು.
ಗಂಗಾಧರ ಕೈಗೆ ಸಿಗುತ್ತಿದ್ದಂತೆ ಆರೋಪಿಗಳು ಸ್ಕಾರ್ಪಿಯೋ ಕಾರಿನಲ್ಲಿ ಆತನನ್ನು ಕರೆದುಕೊಂಡು ಹೋಗು ಹತ್ಯೆ ಮಾಡಿದ್ದರು. ಕೈ, ಕಾಲು, ರುಂಡ, ಮುಂಡ ಬೇರ್ಪಡಿಸಿ ಹಿಂಗಣಿ ಬ್ಯಾರೇಜ್ ಸಮೀಪ ಭೀಮಾನದಿಗೆ ಎಸೆದಿದ್ದರು.
ಕೈ, ಕಾಲುಗಳು ಮಹಾರಾಷ್ಟ್ರದತ್ತ ತೇಲಿ ಹೋಗಿದೆ. ರುಂಡ-ಮಂಡವಿಲ್ಲದ ದೇಹ ಭೀಮಾನದಿಯಲ್ಲಿ ತೇಲುತ್ತಿದ್ದು, ಅದರ ಚಿತ್ರವನ್ನು ರೈತರೊಬ್ಬರು ತೆಗೆದು ಪೊಲೀಸರಿಗೆ ನೀಡಿದ್ದಾರೆ. ಗಂಗಾಧರ ಚಡಚಣ ದೇಹದ ಯಾವುದೇ ಅವಶೇಷ ಇಲ್ಲಿಯ ತನಕ ದೊರೆತಿಲ್ಲ.
ಪಿಎಸ್ಐ ಗೋಪಾಲ ಹಳ್ಳೂರ, ಪೊಲೀಸ್ ಪೇದೆಗಳಾದ ಸಿದ್ಧಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ವಿಚಾರಣೆ ನಡೆಸಿದಾಗ ಹಲವು ಮಾಹಿತಿಗಳು ಲಭ್ಯವಾಗಿದೆ. ಅಗತ್ಯವಿದ್ದರೆ ಈ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ.












Click it and Unblock the Notifications