ವಿಜಯಪುರ; ಮತ್ತೆ ಕಂಪಿಸಿದ ಭೂಮಿ, ಜನರಲ್ಲಿ ಆತಂಕ
ವಿಜಯಪುರ, ಅಕ್ಟೋಬರ್, 02: ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭಾರಿ ಸ್ಪೋಟದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಮಿ ಕಂಪಿಸಿದ ಅನುಭವದಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
Breaking: ವಿಜಯಪುರದಲ್ಲಿ ಮತ್ತೆ ಭೂಕಂಪನ, 3.9 ತೀವ್ರತೆ ದಾಖಲೆ
ಆಗಸ್ಟ್ನಲ್ಲೂ ಕಂಪಿಸಿದ್ದ ಭೂಮಿ; ಈಗಾಗಲೇ ಆಗಸ್ಟ್ನಲ್ಲಿ ಈ ಹಿಂದೆ ವಿಜಯಪುರದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು. ಕಳೆದ ತಿಂಗಳಷ್ಟೆ ಭೂಕಂಪನ ಸಂಭವಿಸಿತ್ತು. ಇದೀಗ ಮತ್ತೆ ಭೂಮಿ ಕಂಪಿಸಿದ್ದು ಸಹಜವಾಗಿಯೇ ಜನರಲ್ಲಿ ಭಯ ಮೂಡಿಸಿದೆ. ವಿಜಯಪುರ ನಗರದಾದ್ಯಂತ ಭೂಕಂಪನ ಅನುಭವವಾಗಿತ್ತು.
ನಗರದ ಗೋಳಗುಮ್ಮಟ ಏರಿಯಾ, ಬಸವ ನಗರ, ಐಶ್ವರ್ಯ ನಗರ, ಠಕ್ಕೆ, ರಾಜ್ಕುಮಾರ್ ಲೇಔಟ್ ಸೇರಿದಂತೆ ನಗರದಲ್ಲೆಡೆ ಭೂಕಂಪನ ಅನುಭವ ಆಗಿದೆ. ಮನೆಯಲ್ಲಿ ಇದ್ದವರಿಗೆ ಭೂಕಂಪನದ ಸ್ಪಷ್ಟ ಅನುಭವ ಉಂಟಾಗಿದೆ. ಅದರಲ್ಲೂ ಎರಡು ಅಂತಸ್ಥಿನ ಮನೆಗಳಲ್ಲಿ ವಾಸವಿರುವವರಿಗೆ ಹೆಚ್ಚಿನ ಕಂಪನದ ಅನುಭವ ಉಂಟಾಗಿತ್ತು.
ಭೂಕಂಪನ ಸಂಭವಿಸುತ್ತಿದ್ದಂತೆ ಜನರು ಮನೆಗಳಿಂದ ಓಡೋಡಿ ಹೊರ ಬಂದಿದ್ದರು. ಮನೆಗಳಲ್ಲಿ ಇದ್ದ ಸಾಮಾನುಗಳು ಅಲುಗಾಡಿದ ಅನುಭವಾಗಿತ್ತು. ಇದರಿಂದ ಹೆದರಿದ ಜನರು ಮನೆಗಳಿಂದ ಓಡೋಡಿ ಹೊರ ಬಂದಿದ್ದರು. ಸಂಬಂಧಿಕರಿಗೆ ಕರೆ ಮಾಡಿ ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದರು.
ಭೂಕಂಪನದ ಅಪಡೇಟ್ ಹಾಗೂ ತೀವ್ರತೆಗಳ ಬಗ್ಗೆ ಮಾಹಿತಿ ನೀಡುವ ಆಪ್ಗಳಲ್ಲೂ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದ ಬಗ್ಗೆ ದಾಖಲಾಗಿತ್ತು. ವಿಜಯಪುರ ನಗರ ಅಷ್ಟೇ ಅಲ್ಲದೆ ಬಸವನ ಬಾಗೇವಾಡಿ, ಇಂಡಿ, ಸಿಂದಗಿ ಭಾಗಗಳಲ್ಲೂ ಭೂಕಂಪನ ಉಂಟಾಗಿರುವ ಬಗ್ಗೆ ಮಾಹಿತಿ ಅಪಡೇಟ್ ಆಗಿತ್ತು. ಅಲ್ಲದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲೂ ಭೂಕಂಪನ ಸಂಭವಿಸಿದೆ ಎನ್ನಲಾಗಿತ್ತು. ಆದರೆ ವಿಜಯಪುರ ಜಿಲ್ಲೆಯಲ್ಲಿ ಉಂಟಾದ ಭೂಕಂಪನಕ್ಕಿಂತಲೂ ತೀವ್ರತೆ ಕಮ್ಮಿ ಇರಬಹುದು ಎಂದು ಶಂಕಿಸಲಾಗಿತ್ತು.
ವಿಶ್ವದೆಲ್ಲೆಡೆ ಸಂಭವಿಸುವ ಭೂಕಂಪನಗಳ ಬಗ್ಗೆ ನಿಖರವಾದ ಮಾಹಿತಿ ನೀಡುವ ವೆಬ್ ಸೈಟ್ ವಿಜಯಪುರ ನಗರದಲ್ಲಿ ಉಂಟಾದ ಭೂಕಂಪನದ ಅಂದಾಜು ತೀವ್ರತೆಯನ್ನು ದಾಖಲಿಸಲಾಗಿತ್ತು. 3.2 ರಿಂದ 3.6 ರಷ್ಟು ತೀವ್ರತೆಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜು ಮಾಡಲಾಗಿತ್ತು.
ಕಳೆದ ಜುಲೈ 9ರಂದು ಸಹ ಭೂಕಂಪನ ಸಂಭವಿಸಿತ್ತು. ಅಂದು ಎರಡು ಬಾರಿ ಭೂಮಿ ಕಂಪಿಸಿತ್ತು. ಬೆಳಗಿನ ಜಾವ 6.22 ನಿಮಿಷಕ್ಕೆ 4.9 ರಷ್ಟು ತೀವ್ರತೆ ದಾಖಲಾಗಿತ್ತು. 6 ಗಂಟೆ 24 ನಿಮಿಷಕ್ಕೆ 4.6 ನಷ್ಟು ತೀವ್ರತೆ ದಾಖಲಾಗಿತ್ತು. ಹಾಗೆ ನೋಡಿದರೆ ಕಳೆದ ವರ್ಷ ವಿಜಯಪುರದಲ್ಲಿ ಉಂಟಾದ ಭೂಕಂಪನಕ್ಕಿಂತಲೂ ನಡುಗಿದ ಪ್ರಮಾಣ ಹೆಚ್ಚಿತ್ತು ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡೆಸಿದ್ದರು. ಮಹಾರಾಷ್ಟ್ರ ರಾಜ್ಯದ ಸಾಂಗಲಿ ಹಾಗೂ ಸೊಲ್ಲಾಪುರಗಳು ಭೂಕಂಪನ ಕೇಂದ್ರಗಳು ಎನ್ನಲಾಗಿತ್ತು.