ವೈರಲ್ ಫೋಟೋ : ಕುಗ್ಗಿಲ್ಲ ಧರ್ಮರಾಜ್ ಚಡಚಣ ಮೇಲಿನ ಅಭಿಮಾನ!
ವಿಜಯಪುರ, ಫೆಬ್ರವರಿ 28 : ಗಂಗಾಧರ ಮತ್ತು ಧರ್ಮರಾಜ್ ಚಡಚಣ ಹತ್ಯೆಯಾಗಿ ಎರಡು ವರ್ಷಗಳು ಕಳೆದಿವೆ. ಕೆಲವು ಜನರಿಗೆ ಅವರ ಮೇಲಿನ ಅಭಿಮಾನ ಇನ್ನೂ ಕಡಿಮೆಯಾಗಿಲ್ಲ. ಜಾತ್ರೆಗೆ ಸ್ವಾಗತ ಕೋರುವ ಬ್ಯಾನರ್ನಲ್ಲಿ ಧರ್ಮರಾಜ್ ಚಡಚಣ ಫೋಟೋ ಇದ್ದು, ಇದು ಈಗ ವೈರಲ್ ಆಗಿದೆ.
ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಪೊಲೀಸ್ ಎನ್ ಕೌಂಟರ್ನಲ್ಲಿ ಹತ್ಯೆಯಾಗಿದ್ದ. ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿ ಕೊಲೆಯಾಗಿ ಹೋಗಿದ್ದ. ವಿಜಯಪುರವನ್ನು ಈ ಘಟನೆ ಬೆಚ್ಚಿ ಬೀಳಿಸಿತ್ತು.
ಧರ್ಮರಾಜ್ ಚಡಚಣ ಎನ್ ಕೌಂಟರ್ ಮತ್ತು ಗಂಗಾಧರ ಚಡಚಣ ಕೊಲೆ ಪ್ರಕರಣತ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು ಎಂಬುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.
ಧರ್ಮರಾಜ್ ಚಡಚಣ ಸುಮಾರು ಮೂರು ವರ್ಷಗಳು ಕಳೆದಿವೆ. ಆದರೆ, ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಜಾತ್ರೆಗೆ ಸ್ವಾಗತ ಕೋರುವ ಬ್ಯಾನರ್ನಲ್ಲಿ ಧರ್ಮರಾಜ್ ಚಡಚಣ ಫೋಟೋವಿದೆ. ಬ್ಯಾನರ್ಗೆ ಹಾಲಿನ ಅಭಿಷೇಕವನ್ನು ಜನರು ಮಾಡಿದ್ದಾರೆ.

ಬ್ಯಾನರ್ಗೆ ಹಾಲಿನ ಅಭಿಷೇಕ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದ ಊರ ದೇವರ ಜಾತ್ರೆಗೆ ಸ್ವಾಗತ ಕೋರುವ ಬ್ಯಾನರ್ನಲ್ಲಿ ಧರ್ಮರಾಜ್ ಚಡಚಣ ಫೋಟೋ ಇದೆ. DMC Boys ಹೆಸರಿನಲ್ಲಿರುವ ಬ್ಯಾನರ್ಗೆ ಜನರು ಹಾಲಿನ ಅಭಿಷೇಕ ಮಾಡಿದ್ದಾರೆ.

ಫೈರಿಂಗ್ ಮಾಡಿದ್ದ
ಲೋಣಿ ಬಿ. ಕೆ. ಗ್ರಾಮದಲ್ಲಿ ಎದುರಾಳಿ ಸಾಹಕಾರ್ ಬೈರಗೊಂಡ ಮೇಲೆ ಧರ್ಮರಾಜ್ ಚಡಚಣ ಫೈರಿಂಗ್ ಮಾಡಿದ್ದ. ಆದ್ದರಿಂದ, ಜನರು ಬ್ಯಾನರ್ ಹಾಕಿ ಸಂಭ್ರಮಿಸಿದ್ದಾರೆ. ಭೀಮಾತೀರದಲ್ಲಿ ನಡೆಯುವ ಹಲವು ಜಾತ್ರೆಗಳ ಬ್ಯಾನರ್ಗಳಲ್ಲಿ ಧರ್ಮರಾಜ್ ಚಡಚಣ ಫೋಟೋ ಇರುತ್ತದೆ ಎಂಬ ಮಾಹಿತಿಯೂ ಇದೆ.

ವಿಜಯಪುರವನ್ನು ನಡುಗಿಸಿದ್ದ ಹತ್ಯೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮದ ಧರ್ಮರಾಜ್ ಚಡಚಣ ಮತ್ತು ಗಂಗಾಧರ ಚಡಚಣ ಈಗ ಬದುಕಿಲ್ಲ. ಈ ಇಬ್ಬರ ಹತ್ಯೆ ಪ್ರಕರಣಗಳು ವಿಜಯಪುರವನ್ನು ನಡುಗಿಸಿದ್ದವು. ಈ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಆದರೆ, ಚಡಚಣ ಸಹೋದರರ ತಾಯಿ ವಿಮಲಾಬಾಯಿ ಸಲ್ಲಿಸಿದ್ದ ದೂರಿನ ಅನ್ವಯ ತನಿಖೆ ನಡೆಯುತ್ತಿದೆ.

ನಿಗೂಢ ನಾಪತ್ತೆ ಕೊಲೆ
2017ರ ಅಕ್ಟೋಬರ್ 30ರಂದು ಬೆಳಗ್ಗೆ 8.15ಕ್ಕೆ ವಿಜಯಪುರ ಕೊಂಕಣಗಾಂವ ಗ್ರಾಮದಲ್ಲಿ ನಡೆದ ಎನ್ ಕೌಂಟರ್ನಲ್ಲಿ ಧರ್ಮರಾಜ್ ಚಡಚಣ ಮೃತಪಟ್ಟಿದ್ದ. ಬಳಿಕ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರ ಬಂಧಿಸಿದ್ದರು. ಪೊಲೀಸ್ ವಶದಲ್ಲಿದ್ದ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ. ಬಳಿಕ ಆತ ಕೊಲೆಯಾದ ವಿಚಾರ ಬೆಳಕಿಗೆ ಬಂದಿತ್ತು. ಧರ್ಮರಾಜ್ ಚಡಚಣ ಎನ್ ಕೌಂಟರ್ ನಕಲಿ ಎಂಬ ಆರೋಪವೂ ಇದೆ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.












Click it and Unblock the Notifications