ಗಂಗಾಧರ ಚಡಚಣ ಹತ್ಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ?
ವಿಜಯಪುರ, ನವೆಂಬರ್ 16 : ವಿಜಯಪುರವನ್ನು ಬೆಚ್ಚಿಬೀಳಿಸಿದ್ದ ಧರ್ಮರಾಜ್ ಮತ್ತು ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆಯೇ?. ಹತ್ಯೆ ಪ್ರಕರಣದ ತನಿಣೆ ನಡೆಸುತ್ತಿರುವ ಸಿಐಡಿ ಹಿರಿಯ ಅಧಿಕಾರಿಗಳ ವಿಚಾರಣೆ ನಡೆಸಿದೆ.
ಚಡಚಣ ಠಾಣೆಯ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ಅಸೋಡೆ ಬಂಧನದ ಬಳಿಕ ಸಿಐಡಿ ಪೊಲೀಸರಿಗೆ ಹಲವು ಮಹತ್ವದ ಮಾಹಿತಿಗಳು ಸಿಕ್ಕಿವೆ. ಆದ್ದರಿಂದ, ಚಡಚಣ ಹತ್ಯೆ ನಡೆದ ಸಂದರ್ಭದಲ್ಲಿ ವಿಜಯಪುರ ಎಸ್ಪಿ, ಎಡಿಜಿಪಿಯಾಗಿದ್ದ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮದ ಚಡಚಣ ಸಹೋದರರ ಹತ್ಯೆ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ಈ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿ ಆಗಿರುವುದು.
ಎನ್ಕೌಂಟರ್ನಲ್ಲಿ ಧರ್ಮರಾಜ್ ಚಡಚಣ ಹತ್ಯೆ ಮಾಡಿದರೆ, ಗಂಗಾಧರ ಚಡಚಣನನ್ನು ಪೊಲೀಸರು ಬಂಧಿಸಿ ವಿರೋಧಿಗಳ ಗುಂಪಿಗೆ ನೀಡಿದ್ದರು. ಅವರು ಆತನನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿದ್ದರು. ಅಕ್ಟೋಬರ್ 30ಕ್ಕೆ ಹತ್ಯೆ ನಡೆದು 1 ವರ್ಷ ಕಳೆದಿದೆ...

ಯಾರ-ಯಾರ ವಿಚಾರಣೆ?
ಗಂಗಾಧರ ಚಡಚಣ ಮತ್ತು ಧರ್ಮರಾಜ್ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಎಸ್ಪಿಯಾಗಿದ್ದ ಕುಲದೀಪ್ ಜೈನ್, ಎಡಿಜಿಪಿ ರಾಮಚಂದ್ರರಾವ್, ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುಣಾರೆ ಹಾಗೂ ಡಿಎಸ್ಪಿ ರವೀಂದ್ರ ಶಿರೂರ್ ಅವರನ್ನು ಸಿಐಡಿ ವಿಚಾರಣೆ ನಡೆಸಿದ್ದು ಹೇಳಿಕೆಯನ್ನು ದಾಖಲೆ ಮಾಡಿಕೊಂಡಿದೆ. ಚಡಚಣ ಠಾಣೆಯ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ಅಸೋಡೆ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸಿಐಡಿ ಹಿರಿಯ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ.

ಸಿಐಡಿಗೆ ಏನು ಹೇಳಿದ್ದರು?
ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ 'ಸಹೋದರರನ್ನು ಕೊಲ್ಲವ ವಿಚಾರದಲ್ಲಿ ನಾನು ಸ್ವತಂ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮೇಲಿನ ಅಧಿಕಾರಿಗಳು ಕೊಟ್ಟ ಸೂಚನೆಯನ್ನು ಪಾಲಿಸಿದ್ದೇನೆ' ಎಂದು ಎಂ.ಬಿ.ಅಸೋಡೆ ಹೇಳಿದ್ದರು. ಆದ್ದರಿಂದ, ಹತ್ಯೆ ನಡೆದ ಸಂದರ್ಭದಲ್ಲಿ ವಿಜಯಪುರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಎಲ್ಲಾ ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ.

ಐಜಿಪಿ ಆಗಿದ್ದರು
ಚಡಚಣ ಸಹೋದರರ ಹತ್ಯೆ ನಡೆಯುವಾಗ ರಾಮಚಂದ್ರರಾವ್ ಅವರು ಉತ್ತರ ವಲಯ ಐಜಿಪಿಯಾಗಿದ್ದರು. ಈಗ ಅವರು ಎಡಿಜಿಪಿಯಾಗಿ ಬಡ್ತಿ ಪಡೆದಿದ್ದಾರೆ. ಸ್ಥಳೀಯ ಶಾಸಕರ ಶಿಫಾರಸ್ಸಿಯ ಅನ್ವಯ ಗೋಪಾಲ್ ಹಳ್ಳೂರ ಅವರನ್ನು ಚಡಚಣ ಠಾಣೆಗೆ ವರ್ಗಾವಣೆ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪವಿದೆ.
'ಮಹಾದೇವ ಭೈರಗೊಂಡ ಸೂಚನೆಯಂತೆ ಗೋಪಾಲ್ ಹಳ್ಳೂರ ಅವರನ್ನು ಚಡಚಣ ಠಾಣೆಗೆ ಕಳುಹಿಸಲಾಗಿತ್ತು' ಎಂದು ಚಡಚಣ ಕುಟುಂಬ ಸದಸ್ಯರು ಆರೋಪ ಮಾಡಿದ್ದರು. (ಚಿತ್ರ : ಮಹಾದೇವ ಬೈರಗೊಂಡ)

ನ.9ರಂದು ಹೇಳಿಕೆ ದಾಖಲು
ನವೆಂಬರ್ 9ರಂದು ಹಿರಿಯ ಪೊಲೀಸ್ ಅಧಿಕಾರಿಗಳು ಸಿಐಡಿ ಮುಂದೆ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ. ಧರ್ಮರಾಜ್ ಚಡಚಣ ಎನ್ಕೌಂಟರ್ ಪ್ರಕರಣದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಎಸ್ಪಿ ಕರೆ ಮಾಡಿ ಹೇಳಿದ ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಕಾನೂನಿನ ಪ್ರಕಾರವೇ ಕೆಲಸ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿಕೆ ದಾಖಲಿಸಿದ್ದಾರೆ.

ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದ್ದರು
ಕೆಲವು ದಿನಗಳ ಹಿಂದೆ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 'ಪೊಲೀಸರೇ ಸುಪಾರಿ ಹಂತಕರಾಗೋದ?, ಇದು ನಾಚಿಗೇಡಿನ ಸಂಗತಿಯಾಗಿದೆ' ಎಂದು ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಸಭೆಯಲ್ಲಿಯಲ್ಲಿ ರಾಮಚಂದ್ರರಾವ್ ಅವರು ಸಹ ಇದ್ದರು ಎಂಬುದು ವಿಶೇಷ.












Click it and Unblock the Notifications