ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ರನ್ನೂ ಬಿಡದ ಯತ್ನಾಳ್
ವಿಜಯಪುರ, ಮಾರ್ಚ್ 21: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ದ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ರಾಜ್ಯ ಉಸ್ತುವಾರಿ ವಿರುದ್ದವೂ ಹೇಳಿಕೆಯನ್ನು ನೀಡಿದ್ದಾರೆ.
ಪಕ್ಷದ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್ ಹೇಳಿಕೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕಾಗಿಲ್ಲ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್, "ಯಾರ ಧ್ವನಿ ಏರುತ್ತೆ, ಯಾವ ಧ್ವನಿ ಕುಗ್ಗುತ್ತೆ ಎನ್ನುವುದಕ್ಕೆ ಕಾಲ ಉತ್ತರ ಕೊಡಲಿದೆ. ನಾನೇನು, ಮೋದಿ ಮತ್ತು ಶಾ ವಿರುದ್ದ ಟೀಕೆ ಮಾಡುತ್ತಿಲ್ಲವಲ್ಲ"ಎಂದು ಹೇಳಿದ್ದಾರೆ.

"ಪಂಚ ರಾಜ್ಯಗಳ ಚುನಾವಣೆ ಮುಗಿಯಲಿ, ಆಗ ತಿಳಿಯುತ್ತದೆ, ಯಾರ ಧ್ವನಿಯನ್ನು ಯಾರು ಕುಗ್ಗಿಸಲೂ ಸಾಧ್ಯವಿಲ್ಲ ಎಂದು. ಕೆಲವು ದಿನಗಳು ಹೀಗೆಯೇ ಮುಂದುವರಿಯಲಿದೆ"ಎಂದು ಯತ್ನಾಳ್ ಅವರು ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, "ಪ್ರಧಾನಿ ಮೋದಿ ಮತ್ತು ವಾಜಪೇಯಿಯವರು ನನ್ನ ಆದರ್ಶ. ಎಂದಾದರೂ ನಾನು ಅವರ ವಿರುದ್ದ ಹೇಳಿಕೆಯನ್ನು ನೀಡಿದ್ದೇನಾ"ಎಂದು ಪ್ರಶ್ನಿಸಿದರು.
"ನನ್ನ ಹೋರಾಟ ಏನಿದ್ದರೂ ಭ್ರಷ್ಟಾಚಾರಿಗಳು ಮತ್ತು ಕುಟುಂಬ ರಾಜಕಾರಣದ ವಿರುದ್ದ"ಎಂದು ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಯಡಿಯೂರಪ್ಪ ವಿರುದ್ದ ಗುಡುಗಿದರು.












Click it and Unblock the Notifications