ಬಂಡಾಯದ ಬಿಸಿ, ಬಿಎಸ್ವೈ ಭಾಷಣದ ವೇಳೆ ಮೈಕ್ ಕಿತ್ತು ಆಕ್ರೋಶ!
ವಿಜಯಪುರ, ಡಿಸೆಂಬರ್ 03 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣದ ವೇಳೆ ಬಿಜೆಪಿ ಕಾರ್ಯಕರ್ತರು ಮೈಕ್ ಕಿತ್ತು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂಡಿಯಲ್ಲಿ ನಡೆದಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶನಿವಾರ ಸಂಜೆ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಿತು. ಬಹಿರಂಗ ಸಮಾವೇಶ ಉದ್ದೇಶಿಸಿ ಯಡಿಯೂರಪ್ಪ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಹೆಸರು ಪ್ರಸ್ತಾಪ ಮಾಡಿದ ಯಡಿಯೂರಪ್ಪ, 'ಸಮಾವೇಶದಲ್ಲಿ ಸಾವಿರಾರು ಜನ ಸೇರುವುದಕ್ಕೆ ರವಿಕಾಂತ ಪಾಟೀಲ ಕಾರಣ' ಎಂದು ಹೇಳಿದರು.

ಆಗ ವೇದಿಕೆ ಮೇಲೆ ಏರಿದ ಇಂಡಿ ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಮುಖಂಡ ಪಾಪು ಕಿತ್ತಲಿ ಹಾಗೂ ದಯಾಸಾಗರ ಪಾಟೀಲ್ ಬೆಂಬಲಿಗರು ಗಲಾಟೆ ಮಾಡಿದರು. ಮೈಕ್ ಕಿತ್ತು ಹಾಕಿ, ಗದ್ದಲ ಮಾಡಿದರು.
ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ತಕ್ಷಣ ವೇದಿಕೆಗೆ ದೌಡಾಯಿಸಿದ ಪೊಲೀಸರು ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಮನವೊಲಿಸಲು ಹರಸಾಹಸ ಪಟ್ಟರು. ಪೊಲೀಸರೊಂದಿಗೆ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು, ನೂಕಾಟ ತಳ್ಳಾಟನಡೆಯಿತು.
ಯಡಿಯೂರಪ್ಪ ಅವರ ಮಧ್ಯ ಪ್ರವೇಶದಿಂದ ಗದ್ದಲ ತಿಳಿಗೊಂಡಿತು. 'ನಾನು ಯಾರನ್ನು ಹೊಗಳಿಲ್ಲ, ತೆಗಳಿಲ್ಲ. ಎಲ್ಲರ ಶ್ರಮ ಇದೆ ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ಕಾರ್ಯಕರ್ತರು ಉದ್ರಕ್ತಗೊಂಡರು.ಟಿಕೆಟ್ ನೀಡುವ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು, ಅದಕ್ಕಾಗಿಯೇ ಸಮೀಕ್ಷೆ ನಡೆಸಿ ಸೂಕ್ತ ಹಾಗೂ ಪ್ರಬಲ ಅಭ್ಯರ್ಥಿ ಆಯ್ಕೆ ಮಾಡಲಾಗುವುದು' ಎಂದು ಸಮಾಧಾನ ಪಡಿಸಿದರು.
ಯಡಿಯೂರಪ್ಪ ಹೇಳಿಕೆ ಬಳಿಕ ಕಾರ್ಯಕರ್ತರು ವೇದಿಕೆಯಿಂದ ನಿರ್ಗಮಿಸಿದರು. ನಂತರ ಯಡಿಯೂರಪ್ಪ ಅವರು ಕೇವಲ ಹತ್ತು ನಿಮಿಷ ಭಾಷಣ ಮಾಡಿ ನಿರ್ಗಮಿಸಿದರು.












Click it and Unblock the Notifications