Vijayapura: ಬೋರ್ವೆಲ್ಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ರಕ್ಷಣಾ ಕಾರ್ಯ ಯಶಸ್ವಿ! ಫಲ ನೀಡಿತು ಸಾವಿರಾರು ಜನರ ಪಾರ್ಥನೆ...
ವಿಜಯಪುರ ಏಪ್ರಿಲ್ 4: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬೋರ್ವೆಲ್ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಮಗು ಸುರಕ್ಷಿತವಾಗಿ ಬರಲೆಂದು ಮಾಡಿದ ಪೂಜೆಗೆ ಫಲ ಸಿಕ್ಕಿದೆ. ತೀವ್ರ ಅಸ್ವಸ್ತಗೊಂಡಿದ್ದ ಮಗು ಸಾತ್ವಿಕ್ ಅನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಸಂಜೆ 6 ಗಂಟೆಗೆ ಎರಡು ವರ್ಷದ ಸಾತ್ವಿಕ್ ಎಂಬ ಮಗು ಆಟವಾಡುತ್ತಾ ಹಾಳುಬಿದ್ದ 260 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದೆ. ಗ್ರಾಮದ ಸತೀಶ ಮುಜಗೊಂಡ ಎಂಬುದರ ಪುತ್ರ ಸಾತ್ವಿಕ್. ಮಾಹಿತಿ ಪಡೆದ ತಕ್ಷಣ ರಕ್ಷಣಾ ಸಿಬ್ಬಂದಿ ಮಗುವಿನ ರಕ್ಷಣಾ ಕಾರ್ಯ ಶುರು ಮಾಡಿತು. ಸತತ 20 ಗಂಟೆಗಳ ಕಾರ್ಯಚರಣೆಯ ಬಳಿಕ ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

ಮನೆಯ ಪಕ್ಕದಲ್ಲಿಯೇ ತೋಟವಿದ್ದು, ಸತೀಶ್ಗೆ 2 ಎಕರೆ 23 ಗುಂಟೆ ಜಮೀನಿದೆ. ತೋಟದಲ್ಲಿ ಲಿಂಬೆ ಬೆಳೆ ಬೆಳೆಯಲಾಗಿದೆ. ಭೀಕರ ಬರಕ್ಕೆ ಲಿಂಬೆ ಬೆಳೆ ಒಣಗುತ್ತಿರುವುದನ್ನು ಕಂಡು ಮಂಗಳವಾರವಷ್ಟೇ ಬೋರ್ವೆಲ್ ಕೊರೆಸಲಾಗಿತ್ತು. ಇದನ್ನು 260 ಅಡಿ ಆಳ ಕೊರೆಸಲಾಗಿದೆ.
ಆದರೆ ಏರ್ಪಾಸ್ ಆಗಿದ್ದರಿಂದ ನೀರು ಬಂದಿರಲಿಲ್ಲ. ಹೀಗಾಗಿ ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಬುಧವಾರ ಮನೆಯ ಮುಂದೆ ಆಟವಾಡುತ್ತಿದ್ದ ಮಗು ಕಾಲು ಜಾರಿ ಕೊಳವೆ ಬಾವಿಯಲ್ಲಿ ಬಿದ್ದಿದೆ. ಬಹಳ ಹೊತ್ತಾದರೂ ಮಗು ಕಾಣದಿದ್ದಾಗ ಮನೆಯವರು ಎಲ್ಲ ಕಡೆ ಹುಡುಕಲು ಆರಂಬಿಸಿದರು.
ಆಗ ಮಗು ಕೊಳವೆ ಬಾವಿಯಲ್ಲಿ ಆಳುವ ಶಬ್ದ ಕೇಳಿ ಬಂದಿದೆ. ಆತಂಕಗೊಂಡ ಕುಟುಂಬಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ, ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮಗುವಿನ ರಕ್ಷಣಾ ಕಾರ್ಯ ಆರಂಭಿಸಿದರು.

ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕೂಡ ಬೀಡು ಬಿಟ್ಟಿದ್ದರು. ಕೊಳವೆ ಬಾಯಿಯ ಮೂಲಕ ಮಗುವಿಗೆ ಆಕ್ಸಿಜನ್ ನೀಡುವ ಕಾರ್ಯ ನಡೆಸಿದರು. ಕ್ಯಾಮರಾ ಇಳಿ ಬಿಟ್ಟು, ಮಗುವಿನ ಚಲನವಲನ ಬಗ್ಗೆ ಗಮನ ಹರಿಸಲಾಯಿತು. ಮಗು 16 ಅಡಿ ಆಳದಲ್ಲಿತ್ತು. ಇನ್ನಷ್ಟು ಕೆಳಗೆ ಇಳಿಯದಂತೆ ಹುಕ್ ಹಾಕಲಾಗಿತ್ತು.
ಆರಂಭದಲ್ಲಿ ಜೆಬಿಸಿ ಬಳಸಿ ಹತ್ತು ಅಡಿ ಆಳ ಕೊರೆಯಲಾಯಿತು. ನಂತರ ಇನ್ನೂ ಆರು ಅಡಿ ಕೊರೆಯುತ್ತಿದ್ದಂತೆ ಮಗುವಿನ ಅಳು ಕೇಳಿ ಬಂತು. ಮಣ್ಣು ಮೆತ್ತಗೆ ಇರುವುದರಿಂದ ಬೇಗ ಮಗುವನ್ನು ತಲುಪಲು ಸಾಧ್ಯವಾಯಿತು. ಕೊನೆಗೂ ಎಲ್ಲರ ಶ್ರಮಕ್ಕೆ ಫಲ ಸಿಕ್ಕಿದೆ. ಮಗುವನ್ನು ಉಳಿಸಿಕೊಡಲು ಬೇಡಿಕೊಂಡ ಪಾರ್ಥನೆ ಕೈಹಿಡಿದಿದೆ. ಮಗು ಸಾತ್ವಿಕ ಜೀವಂತವಾಗಿ ಪೋಷಕರ ಕೈ ಸೇರಿದ್ದಾನೆ.












Click it and Unblock the Notifications