ಪ್ರವಾಸೋದ್ಯಮ ದಿನ: ಸೈಕಲ್ ಸವಾರಿ ಮಾಡಿದ ಉತ್ತರಕನ್ನಡ ಡಿಸಿ
ಕಾರವಾರ, ಸೆಪ್ಟೆಂಬರ್ 28 : ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಉತ್ತರಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೈಕಲ್ ಸವಾರಿ ಮಾಡಿದರು.
ಸುಮಾರು 180ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕೋಡಿಬಾಗದ ಕಾಳಿ ನದಿ ಉದ್ಯಾನದವರೆಗೆ ಸುಮಾರು 3 ಕಿ.ಮೀ. ಸೈಕಲ್ ಸವಾರಿ ಮಾಡಿದರು.
ಜತೆಯಲ್ಲಿ ಡೋಲು, ನಗಾರಿ, ವೇಷಭೂಷಣ ತೊಟ್ಟ ಅಮದಳ್ಳಿಯ ಕಲಾವಿದರ ಕುಣಿತ ಗಮನ ಸೆಳೆದವು. ಪ್ರವಾಸೋದ್ಯಮ ದಿನದ ಸಂದೇಶಗಳನ್ನು ಸಾರುವ ಟಿ- ಶರ್ಟ್ ತೊಟ್ಟು, ಜಿನುಗುತ್ತಿದ್ದ ಮಳೆಯನ್ನು ಲೆಕ್ಕಿಸದೇ ಸೈಕಲ್ ಸವಾರಿ ಮಾಡಿದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳನ್ನು ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಸಾಲಾಗಿ ನಿಂತು ನೋಡುತ್ತಾ ನಿಂತಿದ್ದರು.
ಬಳಿಕ ಕಾಳಿ ನದಿ ಉದ್ಯಾನವನ ತಲುಪಿ, ಅಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ನಕುಲ್, 'ಉತ್ತರಕನ್ನಡ ಜಿಲ್ಲೆ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಈಗಾಗಲೇ ಅಭಿವೃದ್ಧಿ ಹೊಂದಿದ್ದು, ಇಲ್ಲಿ ತಯಾರಾಗುವ ವಿಶೇಷ ಉತ್ಪನ್ನಗಳಾದ ಕಾರವಾರದ ಕೋಕಂ, ಶಿರಸಿಯ ಅನಾನಸುವಿನ ತಿಂಡಿ-ತಿನಿಸುಗಳು, ಕುಮಟಾದ ಕಟ್ಟಿಗೆಯ ಕೆತ್ತನೆಗಳ ಮಾರಾಟಕ್ಕಾಗಿ ಜಿಲ್ಲೆಯ ಮೂರು ಕಡೆ ಮಳೆಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ' ಎಂದು ಹೇಳಿದರು.
'ಹದಿನೈದು ದಿನದಲ್ಲಿ ಮುರ್ಡೇಶ್ವರದಲ್ಲಿ, ಒಂದು ತಿಂಗಳ ಒಳಗೆ ಕಾರವಾರ ಹಾಗೂ ಗೋಕರ್ಣದಲ್ಲಿ ಉತ್ಪನ್ನ ಮಳಿಗೆಗಳು ತೆರೆಯಲಿವೆ.
ಆ ಮೂಲಕ ಇಲ್ಲಿನ ಸಾಂಪ್ರದಾಯಿಕ ಹಾಗೂ ಮನೆ ಉತ್ಪನ್ನಗಳನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶ ಇದರದಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಇಲ್ಲಿನ ವಿವಿಧ ಕಡಲತೀರಗಳಿಗೆ ಜೀವ ರಕ್ಷಕರನ್ನು ಈಗಾಗಲೇ ನೇಮಕ ಮಾಡಲಾಗಿದೆ' ಎಂದು ಹೇಳಿದರು.
'ಇಲ್ಲಿಗೆ ಬರುವ ಪ್ರವಾಸಿಗರಿಗೆ ಸ್ಥಳಗಳ ಪರಿಚಯ, ವೈಶಿಷ್ಠ್ಯತೆಗಳನ್ನು ಅರಿಯಲು, ಮಾಹಿತಿ ಪಡೆದುಕೊಳ್ಳಲು 'ಕೋ ರೋವರ್ ಕನೆಕ್ಟ್' ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಕೂಡ ಬಳಕೆಗೆ ಇಂದಿನಿಂದ ನೀಡಲಾಗಿದೆ.
ಮೊದಲು ಒಂದು ತಿಂಗಳು ಮುರ್ಡೇಶ್ವರದಲ್ಲಿ ಇದನ್ನು ಪ್ರಯೋಗ ಮಾಡುತ್ತಿದ್ದೇವೆ' ಎಂದ ಅವರು, 'ಪ್ರವಾಸಿಗರಿಗೆ ಇಲ್ಲಿನ ಕಲೆಗಳನ್ನು ಪರಿಚಯಿಸಲೆಂದು, ಗೋಕರ್ಣದ ಕಲಡತೀರದಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರದಂದು ಯಕ್ಷಗಾನವನ್ನು ಪ್ರದರ್ಶಿಸಲಾಗುತ್ತದೆ.
ಕೆರೆಮನೆ ಶಿವಾನಂದ ಹೆಗಡೆ ಅವರ ನೇತೃತ್ವದಲ್ಲಿ ಇದು ಒಂದು ತಿಂಗಳ ಕಾಲ ನಡೆಯಲಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ಹಾಗೆಯೇ ಅದನ್ನು ಮುಂದುವರಿಸುತ್ತೇವೆ' ಎಂದರು.