ಸ್ಪರ್ಧೆಯಿಂದ ಹಿಂದೆ ಸರಿದ ಶೋಭಾ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಯಶ್ಪಾಲ್ ಸುವರ್ಣ ಸ್ಪರ್ಧೆ?
Recommended Video

ಉಡುಪಿ, ಮಾರ್ಚ್ 15:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಮೂಲಗಳ ಮಾಹಿತಿ ಪ್ರಕಾರ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ಪರ್ಧೆಯಿಂದ ಸಂಸದೆ ಶೋಭಾ ಕರಂದ್ಲಾಜೆ ಹಿಂದೆ ಸರಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಮಹತ್ವದ ಬೆಳವಣಿಗೆ ಒಂದರಲ್ಲಿ ಉಡುಪಿಯ ಬಿಜೆಪಿ ಯುವ ಮುಖಂಡ ಯಶ್ಪಾಲ್ ಸುವರ್ಣ ಅವರಿಗೆ ದೆಹಲಿಯಿಂದ ಬುಲಾವ್ ಬಂದಿದ್ದು, ಅವರು ತುರ್ತಾಗಿ ದೆಹಲಿಗೆ ತೆರಳಿದ್ದಾರೆ.
ಶೋಭಾ ಕರಂದ್ಲಾಜೆಯವರು ರಾಜ್ಯ ಬಿಜೆಪಿಯ ಪ್ರಮುಖ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗೆ ನಾಂದಿ ಹಾಡಲಿದ್ದಾರೆ ಎಂದು ವಿಮರ್ಶಿಸಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರಕಾರ ರಚಿಸಲು ನಡೆಸಿದ ಹಲವಾರು ಕಸರತ್ತುಗಳ ಹಿಂದೆ ಶೋಭಾ ಕರಂದ್ಲಾಜೆಯವರ ಪಾತ್ರವಿತ್ತು.
ಆದರೆ ಈಗ ಶೋಭಾ ಅವರು ಮಹತ್ವದ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ರಣತಂತ್ರ ಹೆಣೆಯಲು ಸಿದ್ದರಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿಯ ಆಂತರಿಕ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ರಾಜ್ಯದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೇವಲ 2 ಹೆಸರುಗಳಷ್ಟೇ ಅಂತಿಮವಾಗಿದ್ದವು.ಆ ಎರಡು ಹೆಸರು ಯಾರದ್ದು ಗೊತ್ತಾ? ಮುಂದೆ ಓದಿ...

ಇವರ ಹೆಸರನ್ನು ಎಲ್ಲೂ ಸೂಚಿಸಿಲ್ಲ
ಮೊದಲ ಹೆಸರು ಶೋಭಾ ಕರಂದ್ಲಾಜೆ ಮತ್ತು ಎರಡನೇ ಹೆಸರು ಯಶ್ಪಾಲ್ ಸುವರ್ಣ ಅವರದ್ದಾಗಿತ್ತು. ಜಯಪ್ರಕಾಶ್ ಹೆಗಡೆ ಮತ್ತಿತರರು ಟಿಕೆಟಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಸಂಘ ಪರಿವಾರ ಇವರ ಹೆಸರನ್ನು ಎಲ್ಲೂ ಸೂಚಿಸಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಶೋಭಾ ಮತ್ತು ಯಶ್ ಪಾಲ್ ಹೆಸರಷ್ಟೇ ಅಂತಿಮಗೊಂಡಿತ್ತು.

ಇದೀಗ ಎರಡು ಹೆಸರುಗಳಿವೆ
ಲೋಕಸಭಾ ಚುನಾವಣೆಯ ಟಿಕೆಟ್ ಅಂತಿಮಗೊಳಿಸುವ ಸಂಸದೀಯ ಸಮಿತಿಯ ಮುಂದೆ ಇದೀಗ ಎರಡು ಹೆಸರುಗಳಿವೆ. ಇದರ ಜೊತೆಗೆ ಪಕ್ಷವು ಒಂದಷ್ಟು ಖಾಸಗಿ ಏಜೆನ್ಸಿಗಳ ಮೂಲಕ ನಡೆಸಿರುವ ಸಮೀಕ್ಷೆಯನ್ನೂ ಅಭ್ಯರ್ಥಿ ಆಯ್ಕೆಗೆ ಪರಿಗಣಿಸುತ್ತಾರೆ ಎಂದು ತಿಳಿದು ಬಂದಿದೆ.

ಪ್ರಬಲ ಸಮುದಾಯಗಳ ಬೆಂಬಲ
ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ಸಿಕ್ಕಿದರೆ ಹಿಂದುಳಿದ ವರ್ಗ ಸೇರಿದಂತೆ ಬಂಟ, ಬಿಲ್ಲವ ಎರಡೂ ಪ್ರಬಲ ಸಮುದಾಯಗಳು ಬಿಜೆಪಿಯನ್ನೂ ಪೂರ್ಣ ರೀತಿಯಲ್ಲಿ ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಅದಲ್ಲದೇ, ಮೀನುಗಾರರ ಸಮುದಾಯ ಕೂಡ ಬಿಜೆಪಿಯನ್ನು ಬೆಂಬಲಿಸಲಿದೆ.

ಕುತೂಹಲ ಮೂಡಿಸಿದ ಆಯ್ಕೆ
ಚಿಕ್ಕಮಗಳೂರು ಭಾಗದಲ್ಲಿಯೂ ಯಶಪಾಲ್ ಪರವಾಗಿ ಉತ್ತಮ ಜನಾಭಿಪ್ರಾಯವಿದೆ. ಈ ನಡುವೆ ಜಯಪ್ರಕಾಶ್ ಹೆಗ್ಡೆ ಕೂಡ ಟಿಕೆಟ್ ಗಾಗಿ ಭಾರೀ ಲಾಭಿ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಆಯ್ಕೆ ಕುತೂಹಲ ಮೂಡಿಸಿದೆ.












Click it and Unblock the Notifications