ನೂತನ ಬಿಜೆಪಿ ಸರ್ಕಾರದಲ್ಲಿ ಉಡುಪಿಯ ಯಾರಿಗೆ ಒಲಿಯುವುದು ಸಚಿವ ಸ್ಥಾನ?
ಉಡುಪಿ, ಜುಲೈ 25: ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನೂತನ ಬಿಜೆಪಿ ಸರಕಾರ ರಚನೆಗೆ ಕಸರತ್ತು ಆರಂಭವಾಗಿದೆ. ಈ ಹಿನ್ನೆಲೆ ಬಿಜೆಪಿ ಸಂಘ ಪರಿವಾರದ ಘಡ ಎಂದೇ ಹೇಳಲಾಗುವ ಕರಾವಳಿಯಲ್ಲಿ ಈಗ ರಾಜಕೀಯದ ಲೆಕ್ಕಾಚಾರಗಳು ಗರಿಗೆದರಿವೆ.
ಉಡುಪಿ ಜಿಲ್ಲೆಯಲ್ಲಿ ಎಲ್ಲಾ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಎಲ್ಲಾ 5 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಉಡುಪಿ ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ಒಲಿದು ಬರುವುದು ಗ್ಯಾರಂಟಿ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
ಉಡುಪಿಯಲ್ಲಿ ಬಹುತೇಕ ಎಲ್ಲಾ ಘಟಾನುಘಟಿ ನಾಯಕರೇ ಬಿಜೆಪಿಯಲ್ಲಿ ಆಯ್ಕೆಯಾಗಿರುವುದು ಮತ್ತು ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳೇ ಆಗಿದ್ದು ಶಾಸಕರ ಆಯ್ಕೆ ತಲೆ ನೋವಾಗಬಹುದು ಎಂದು ಹೇಳಲಾಗಿದೆ.

ಒಂದೆಡೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಶ್ರೀನಿವಾಸ ಹಾಲಾಡಿ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ನಡುವೆ ಆಯ್ಕೆ ನಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಕಾಪು ಶಾಸಕ ಲಾಲಜಿ ಮೆಂಡನ್ ಹಿರಿಯ ನಾಯಕರಾದರೂ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ತೀರಾ ಕಮ್ಮಿ ಎಂಬ ಮಾತು ಕೇಳಿಬಂದಿದೆ.
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಶಕಗಳಿಂದ ಬಿಲ್ಲವ ಸಮುದಾಯ ಬಿಜೆಪಿ ಕೈ ಹಿಡಿಯುತ್ತಿದೆ. ಹಿಂದೂ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಈ ಸಮುದಾಯದ ಯುವಕರೇ ಹೆಚ್ಚಾಗಿ ಕಾಣಸಿಗುತ್ತಿರುವುದು ಒಂದು ಸಚಿವ ಸ್ಥಾನವನ್ನು ಬಿಜೆಪಿ ಆ ಸಮುದಾಯಕ್ಕೆ ನೀಡಲೇಬೇಕಾದ ಅನಿವಾರ್ಯತೆಯನ್ನು ಹೆಚ್ಚಿಸಿದೆ. ಪಕ್ಷದಲ್ಲಿ ಈ ನಿಯಮ ಪಾಲನೆಗೆ ಬಂದರೆ ಕುಮಾರ ಬಂಗಾರಪ್ಪನವರಿಗೆ ಸಚಿವ ಸ್ಥಾನ ದೊರಕದೇ ಹೋದರೆ ಕೋಟ ಶ್ರೀನಿವಾಸ್ ಪೂಜಾರಿ ಅಥವಾ ಸುನೀಲ್ ಕುಮಾರ್ ಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಅಧಿಕವಾಗಿದೆ.
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ 2009ರಲ್ಲಿ ಸ್ವಲ್ಪದರಲ್ಲಿ ಅವಕಾಶ ಕೈ ತಪ್ಪಿತ್ತು. ಅದರಿಂದ ಮುನಿಸಿಕೊಂಡಿದ್ದ ಅವರು ಬಿಜೆಪಿ ತೊರೆದಿದ್ದರು. ಪುನಃ ಪಕ್ಷಕ್ಕೆ ಅವರನ್ನು ಬರಮಾಡಿಕೊಳ್ಳುವಾಗ ಅವರಿಗೆ ಆದ ಅನ್ಯಾಯವನ್ನು ಸರಿಪಡಿಸುವ ವಾಗ್ದಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರಕುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಕುತೂಹಲಕ್ಕೆ ಕಾಲವೇ ಉತ್ತರಿಸಲಿದೆ.












Click it and Unblock the Notifications