ಪೇಜಾವರ ಶ್ರೀಗಳನ್ನು ನೋಡಲು ಹೊರಟಿದ್ದ ಸಿದ್ದರಾಮಯ್ಯ: ಅವರನ್ನು ತಡೆದಿದ್ದು ಇವರೇನಾ?
ನಾಡಿನ ಹಿರಿಯ ಸಂತ, ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳನ್ನು ನೋಡಲು ಹೊರಟಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ತಡೆದವರು ಯಾರು? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಮಾನವೀಯತೆ ತೋರಬೇಕಾದ ಈ ಹೊತ್ತಿನಲ್ಲಿ ಸಿದ್ದರಾಮಯ್ಯನವರ ದಾರಿತಪ್ಪಿಸಿದವರು ಅವರ ಪರಮಾಪ್ತ ವಲಯದವರಾ ಅಥವಾ ಕರಾವಳಿಯ ಕಾಂಗ್ರೆಸ್ ಮುಖಂಡರೇ ಎನ್ನುವುದೀಗ ಚರ್ಚೆಯ ವಿಷಯವಾಗಿದೆ.
ಉಡುಪಿ ಮಠಕ್ಕೂ ಸಿದ್ದರಾಮಯ್ಯ ನಡುವಿನ ಸಂಬಂಧ ಹಿಂದಿನಿಂದಲೂ ಅಷ್ಟಕಷ್ಟೇ.. ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ ಐದಾರು ಬಾರಿಯಾದರೂ ವಿವಿಧ ಸರಕಾರೀ ಕಾರ್ಯಕ್ರಮಕ್ಕೆ ಉಡುಪಿಗೆ ಬಂದಿದ್ದರೂ, ಕೃಷ್ಣಮಠಕ್ಕೆ ಹೋಗಿರಲಿಲ್ಲ.
ಆದರೆ ಈ ಬಾರಿ, ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬದವರ ಸಾಂತ್ವನಕ್ಕೆ ತೆರಳಿದ್ದ ಸಿದ್ದರಾಮಯ್ಯ, ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿಕೊಂಡು ಬರುವ ಕಾರ್ಯಕ್ರಮ ನಿಗದಿಯಾಗಿತ್ತು. ಸುದ್ದಿಗೋಷ್ಠಿಯಲ್ಲೂ ಅದನ್ನು ಸಿದ್ದರಾಮಯ್ಯ ಹೇಳಿದ್ದರು.

ಪರಿಸ್ಕೃತ ವೇಳಾಪಟ್ಟಿಯಲ್ಲಿಯೂ ನಮೂದಿಯಾಗಿತ್ತು
ಅವರ ಪರಿಸ್ಕೃತ ವೇಳಾಪಟ್ಟಿಯಲ್ಲಿಯೂ ಅದು ನಮೂದಿಯಾಗಿತ್ತು. ಮಂಗಳೂರಿನಿಂದ ಮಧ್ಯಾಹ್ನ ಮೂರು ಗಂಟೆಗೆ ರಸ್ತೆಯ ಮೂಲಕ ಉಡುಪಿಗೆ ತೆರಳಿ, ಮಣಿಪಾಲದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿ, ವಾಪಸ್ ಮಂಗಳೂರಿನ ಮೂಲಕ ಬೆಂಗಳೂರಿಗೆ ವಾಪಸ್ ತೆರಳುವ ಕಾರ್ಯಕ್ರಮ ಪಟ್ಟಿಯಲ್ಲಿತ್ತು.

ಡಾಕ್ಟರ್ ವಿಶ್ರಾಂತಿ ಪಡೆಯಬೇಕೆಂದು ಹೇಳಿದ್ದಾರೆಂದು ಹೇಳಿ, ಬೆಂಗಳೂರಿಗೆ ವಾಪಸ್
ಆದರೆ, ಅದೇನಾಯಿತೋ, ಡಾಕ್ಟರ್ ವಿಶ್ರಾಂತಿ ಪಡೆಯಬೇಕೆಂದು ಹೇಳಿದ್ದಾರೆಂದು ಹೇಳಿ, ಬೆಂಗಳೂರಿಗೆ ಸಿದ್ದರಾಮಯ್ಯ ವಾಪಸ್ ಬಂದಿದ್ದರು. ಅವರ ಜೊತೆಗೆ ಮಂಗಳೂರಿನಲ್ಲಿದ್ದ ಎಂ.ಬಿ.ಪಾಟೀಲ್ ಮತ್ತು ಜಮೀರ್ ಅಹಮದ್ ಮಾತ್ರ ಉಡುಪಿಗೆ ತೆರಳಿ, ಶ್ರೀಗಳ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.

ಸಮುದಾಯಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ
ಸಿದ್ದರಾಮಯ್ಯ, ಶ್ರೀಗಳನ್ನು ನೋಡಲು ತೆರಳದಂತೆ ಮಾಡಿದ್ದು ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ, ಈಗ ತಾನೇ, ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬದವರನ್ನು ಭೇಟಿಯಾಗಿದ್ದೀರಾ, ಇಂತಹ ಸಮಯದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದರೆ, ಅಲ್ಪಸಂಖ್ಯಾತ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎನ್ನುವುದು ಆ ಕಾಂಗ್ರೆಸ್ ಮುಖಂಡರ ವಾದವಾಗಿತ್ತು.

ಕರಾವಳಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರ ಉಡುಪಿ ಭೇಟಿಯನ್ನು ತಪ್ಪಿಸಿದ್ದರು
ಆ ಕಾರಣಕ್ಕಾಗಿ, ಕರಾವಳಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರ ಉಡುಪಿ ಭೇಟಿಯನ್ನು ತಪ್ಪಿಸಿದ್ದರು ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ, ಉಡುಪಿಗೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆಂದು ಹೇಳಲಾಗುತ್ತಿದ್ದರೂ, ಇದುವರೆಗೆ ಯಾವುದೂ ಖಚಿತವಾಗಿಲ್ಲ/ಅಧಿಕೃತವೂ ಆಗಿಲ್ಲ.

ಪೇಜಾವರ ಶ್ರೀಗಳನ್ನು, ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ, ನೋಡಿಕೊಂಡು ಬರಬೇಕಾಗಿತ್ತು
ಮಾಜಿ ಸಚಿವ ಎಂ.ಬಿ.ಪಾಟೀಲ್, "ಎಲ್ಲದಕ್ಕೂ ಏನೇನೋ ಸಂಬಂಧ ಕಲ್ಪಿಸಬೇಡಿ" ಎಂದು ಮಾಧ್ಯಮದವರ ಮೇಲೆ ಗರಂ ಆಗಿ, ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ, ಶ್ರೀಗಳನ್ನು ನೋಡಲು ಬರುತ್ತಾರೆಂದೇನೋ ಹೇಳಿದ್ದಾರೆ. ಆದರೂ, ಮಠದ ಮೇಲೆ ಏನೇ ಭಿನ್ನಾಭಿಪ್ರಾಯವಿದ್ದರೂ, ಇಂತಹ ಸಮಯದಲ್ಲಿ, ಅಪಾರ ಭಕ್ತ ಸಮೂಹವನ್ನು ಹೊಂದಿರುವ ಪೇಜಾವರ ಶ್ರೀಗಳನ್ನು, ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ, ನೋಡಿಕೊಂಡು ಬರಬೇಕಾಗಿತ್ತು ಎನ್ನುವುದು ಬಹುತೇಕ ಎಲ್ಲರ ಅಭಿಪ್ರಾಯ.












Click it and Unblock the Notifications