ಅಂದು ವಾದಿರಾಜ ಗುರುಗಳು ಸೃಷ್ಟಿಸಿದ್ದ ಜಾಗದಲ್ಲಿ ಈಗಲೂ ನೀರಿನ ಸೆಲೆ
ಶತಮಾನದ ಹಿಂದೆ ವಾದಿರಾಜ ಗುರುಗಳು ತಮ್ಮ ಕಮಂಡಲದಿಂದ ನೀರು ಸೃಷ್ಟಿಸಿದ್ದ ಸ್ಥಳಕ್ಕೆ ಹಾಲೀ ಸೋದೆ ವಾದಿರಾಜ ಮಠದ ಪೀಠಾಧಿಪತಿಗಳಾದ ವಿಶ್ವವಲ್ಲಭ ತೀರ್ಥರು ಇತ್ತೀಚಿಗೆ ಭೇಟಿ ನೀಡಿದ್ದರು.
ಉಡುಪಿ, ಜುಲೈ 13: ಭಾವಿಸಮೀರ ಶ್ರೀವಾದಿರಾಜ ಗುರುಗಳು ಶತಮಾನಗಳ ಕೆಳಗೆ ತಮ್ಮ ಮಂತ್ರ ಶಕ್ತಿಯಿಂದ ಸೃಷ್ಟಿಸಿದ್ದ ನೀರಿನ ಸೆಲೆಯ ಪ್ರದೇಶಕ್ಕೆ ಹಾಲೀ ಸೋದೆ ವಾದಿರಾಜ ಮಠದ ಪೀಠಾಧಿಪತಿಗಳಾದ ವಿಶ್ವವಲ್ಲಭ ತೀರ್ಥರು ಇತ್ತೀಚಿಗೆ ಭೇಟಿ ನೀಡಿದ್ದರು.
ಉಡುಪಿ ಹೊರವಲಯದ ಕೆಮುಂಡೇಲು ಎನ್ನುವ ಪುಟ್ಟಗ್ರಾಮಕ್ಕೆ ವಿಶ್ವವಲ್ಲಭ ತೀರ್ಥರು ಭೇಟಿ ನೀಡಿದ ಸಂದರ್ಭದಲ್ಲಿ ಊರಿನ ಪ್ರಮುಖರು, ಜನರು ಹಾಜರಿದ್ದು ಶ್ರೀಗಳನ್ನು ಸ್ವಾಗತಿಸಿ, ಪ್ರದೇಶದ ಮಾಹಿತಿಯನ್ನು ನೀಡಿದರು.

ಕೆಮುಂಡೇಲು ಊರಿನ ಹೆಸರಿನ ಹಿಂದೆ ಒಂದು ಇತಿಹಾಸವಿದೆ. ಭಾವಿಸಮೀರ ಶ್ರೀವಾದಿರಾಜರು ಈ ಪ್ರದೇಶಕ್ಕೆ ಬಂದಾಗ ಅಲ್ಲಿರುವ ಕೃಷಿಕರು, ಈ ಸ್ಥಳದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವವಿದೆ ಅನುಗ್ರಹಿಸಬೇಕು ಎಂದು ಗುರುಗಳನ್ನು ಪ್ರಾರ್ಥಿಸಿದ್ದರು.
ಆಗ ಶ್ರೀವಾದಿರಾಜರು ಒಂದು ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಕಮಂಡಲುವನ್ನು ಇರಿಸಿ ನೀರಿನ ಸೆಲೆಯನ್ನು ಸೃಷ್ಟಿಸಿದರು. ಆ ಪ್ರದೇಶಕ್ಕಿದ್ದ ನೀರಿನ ಅಭಾವವನ್ನು ನೀಗಿಸಿದರು. ಶ್ರೀವಾದಿರಾಜರು ತಮ್ಮ ಕಮಂಡಲುವನ್ನು ಇರಿಸಿ ನೀರನ್ನು ಸೃಷ್ಟಿಸಿದ್ದರಿಂದ ಆ ನೀರಿನ ಕುಂಡ 'ಕಮಂಡಲು ತೀರ್ಥ'ಎಂದೇ ಪ್ರಸಿದ್ಧಿಯಾಯಿತು.
ಕಾಲಕ್ರಮೇಣ ಆ ಊರಿನ ಹೆಸರೇ' ಕೆಮುಂಡೇಲು' ಎಂದಾಯಿತು. ಇವತ್ತಿಗೂ ಆ ಕುಂಡದಲ್ಲಿ ಕಡು ಬೇಸಿಗೆಯ ಸಮಯದಲ್ಲೂ ನೀರು ಬತ್ತುವುದಿಲ್ಲ. ಅಂದು ವಾದಿರಾಜರು ಸೃಷ್ಟಿಸಿದ ನೀರು ಇವತ್ತಿಗೂ ಜೀವಂತವಾಗಿದೆ.
ಇವತ್ತಿಗೂ ಈ ಪರಿಸರಕ್ಕೆ ಸೂತಕದವರು, ರಜಸ್ವಲೆಯರು ಪ್ರವೇಶಿಸುವಂತಿಲ್ಲ. ಪ್ರವೇಶಿಸಿದವರು ಅನರ್ಥಗಳನ್ನು ಅನುಭವಿಸಿದ್ದಾರೆ. ಅಲ್ಲೇ ಸಮೀಪದಲ್ಲಿ 'ಜನ್ನಿ' ಎಂಬ ಮನೆತನದವರಿಗೆ ಲಕ್ಷ್ಮೀ ನಾರಾಯಣ ದೇವರ ಪ್ರತಿಮೆಯನ್ನೂ ಶ್ರೀ ವಾದಿರಾಜರು ಅನುಗ್ರಹಿಸಿದ್ದರು.












Click it and Unblock the Notifications