ಅದ್ಯಾರದ್ದೋ ತಾಯಿಗೆ, ಇನ್ನೆಲ್ಲೋ ಹುಟ್ಟಿದ ಮಗನಿಂದ ಅಂತ್ಯ ಸಂಸ್ಕಾರ
ಉಡುಪಿ, ಮಾರ್ಚ್ 29: ಋಣಾನುಬಂಧ ಎನ್ನುವುದು ಎಲ್ಲೆಲ್ಲಿ, ಯಾರು ಯಾರೊಂದಿಗೆ ದೇವರು ಬರೆದಿರುತ್ತಾನೋ ಗೊತ್ತಿಲ್ಲ. ಆದರೆ ಋಣಾನುಬಂಧ ಇರುವುದಂತೂ ನಿಜ. ಅದ್ಯಾರದ್ದೋ ತಾಯಿಗೆ, ಇನ್ನೆಲ್ಲೋ ಹುಟ್ಟಿದ ಮಗನೊಬ್ಬ ಅಂತ್ಯ ಸಂಸ್ಕಾರ ನಡೆಸುತ್ತಾನೆ ಎಂದಾದರೆ ಅದಕ್ಕಿಂದ ಮಿಗಿಲಾದ ಋಣಾನುಬಂಧಕ್ಕೆ ಬೇರೆ ಉದಾಹರಣೆ ಬೇಕೆ?
ತಾಯಿಗೆ ಮಗನಿಲ್ಲದಿದ್ದರೂ, ಹೆತ್ತ ಮಗನಂತೆ ಮುಂದೆ ನಿಂತು ಈ ವ್ಯಕ್ತಿ ಅಂತ್ಯಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಉಡುಪಿಯಲ್ಲಿ ನಡೆದಿದೆ. ಬೀದಿಯಲ್ಲಿ ಹೆಣವಾಗಿ ಹೋಗಬೇಕಿದ್ದ ಆ ನಿರ್ಗತಿಕ ತಾಯಿಯ ಪಾರ್ಥಿವ ಶರೀರಕ್ಕೆ ಉಡುಪಿಯ ಸಮಾಜ ಸೇವಕರೊಬ್ಬರು ಮಗನಂತೆ ಸಕಲ ಗೌರವ ನೀಡಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿಯ ರಥ ಬೀದಿಗೆ ಭೇಟಿ ನೀಡುವ ಪ್ರತಿಯೊಬ್ಬರು ಆ ನಿರ್ಗತಿಕ ವೃದ್ಧೆಯನ್ನು ರಸ್ತೆ ಬದಿಯಲ್ಲಿ ಗಮನಿಸಿಯೇ ಇರುತ್ತಾರೆ. ಆದರೆ ಯಾರೂ ಆಕೆಯ ಕುರಿತು ಅಷ್ಟೊಂದು ಗಮನ ಹರಿಸಿಲ್ಲ. ಆ ವಯೋವೃದ್ಧೆ ಅದಾಗಲೇ ಮನೆಬಿಟ್ಟು 5 ದಶಕಗಳೇ ಕಳೆದಿತ್ತು. ಉಡುಪಿ ಕೃಷ್ಣ ಮಠದ ರಥಬೀದಿಯಲ್ಲೇ ಆಕೆಯ ದಿನಚರಿ, ವಾಸ ಎಲ್ಲವೂ.

ಅದೆಲ್ಲೋ ಹುಟ್ಟಿದ ತಾಯಿಗೆ, ಇನ್ನೆಲ್ಲೋ ಹುಟ್ಟಿದ ಮಗನಂತಿದ್ದದ್ದು ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ. ಆ ನಿರ್ಗತಿಕ ವಯೋ ವೃದ್ದೆಯ ಬಾಳಿಗೆ ಬೆಳಕಾಗಿ ಮಗನಂತೆ ವಿಶು ಶೆಟ್ಟಿ ಇದ್ದರು. ಕಳೆದ ಹಲವು ವರುಷಗಳಿಂದ ವಿಶು ಶೆಟ್ಟಿ ಈ ವೃದ್ದೆಯ ಆರೈಕೆಯನ್ನುಮಾಡುತ್ತಾ ಬಂದಿದ್ದರು.
ಎರಡು ವರುಷಗಳ ಹಿಂದೆ ವೃದ್ದೆ ಸುಂದರಿ ಶೆಟ್ಟಿಗಾರ್ ತನ್ನನ್ನು ಪ್ರೀತಿಯಿಂದ ಕಾಣೋ ಮಗನಿಗೆ ಸಮನಾದ ವಿಶು ಶೆಟ್ಟಿ ಬಳಿ ತನ್ನ ಕೊನೆಯಾಸೆಯನ್ನು ಹೇಳಿಕೊಂಡಿದ್ದರು.
ನನ್ನವರು ಅಂತ ತನಗೆ ಯಾರೂ ಇಲ್ಲ. ಈ ಪ್ರಪಂಚದಲ್ಲಿ ಎಲ್ಲವೂ ನೀನೆ. ಒಂದು ವೇಳೆ ನಾನೇನಾದ್ರೂ ಮೃತಪಟ್ಟರೆ ನೀನೇ ನನ್ನ ಶವ ಸಂಸ್ಕಾರ ನಡೆಸಬೇಕು. ವಾದ್ಯ, ಓಲಗ ಮೂಲಕ ನನ್ನ ಶವ ಕೊಂಡೊಯ್ಯಬೇಕು. ಅಲ್ಲದೇ ತನಗೆ ಹೊಸ ಬಟ್ಟೆ, ಬಳೆ, ಕುಂಕುಮ ವಿಟ್ಟು ನನ್ನನ್ನು ಕೊಂಡೊಯ್ಯಬೇಕು ಎಂದು ತನ್ನ ಕೊನೆಯಾಸೆಯನ್ನು ವಿಶು ಶೆಟ್ಟಿಯವರಲ್ಲಿ ತೋಡಿಕೊಂಡಿದ್ದರು.

70 ರ ಹರೆಯದ ಆ ವಯೋವೃದ್ದೆ ಸುಂದರಿ ಶೆಟ್ಟಿಗಾರ್ ಅವರಿಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಈ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಮೊದಲಿಗೆ ಮೃತ ಸುಂದರಿ ಶೆಟ್ಟಿಗಾರ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿದರು. ಆದರೆ ಮೃತ ಸುಂದರಿ ಅವರ ಬಗ್ಗೆ ಮನೆಯವರು ನಿರಾಸಕ್ತಿ ವಹಿಸಿದ್ದರು.
5 ದಶಕಗಳ ಹಿಂದೆ ಸುಂದರಿ ಶೆಟ್ಟಿಗಾರ್ ಅವರು ಮನೆ ಬಿಟ್ಟು ಹೋಗಿದ್ದರಿಂದ ಮನೆಯವರಿಗೂ ಆ ವಯೋವೃದ್ದೆ ಮೇಲಿನ ಪ್ರೀತಿ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ತಾಯಿಯ ಕೊನೆಯಾಸೆಯಂತೆ ವಿಶು ಶೆಟ್ಟಿಯವರೇ ಮುಂದೆ ನಿಂತು ಉಡುಪಿಯ ಬೀಡಿನಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಈ ಮೂಲಕ ವಿಶು ಶೆಟ್ಟಿ ಸುಂದರಿಯವರ ಸ್ವಂತ ಮಗನಂತೆ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅದಕ್ಕೆ ಹೇಳುವುದು ಋಣಾನುಬಂಧ ಎನ್ನುವುದು ಎಲ್ಲೆಲ್ಲಿ ಇರುತ್ತದೋ ಹೇಳಲು ಸಾಧ್ಯವಿಲ್ಲ. ಎಲ್ಲಾ ಆ ಭಗವಂತನ ಇಚ್ಛೆ!












Click it and Unblock the Notifications