ಉಚ್ಚಿಲ ರುದ್ರಭೂಮಿ ವಿವಾದ: ಪೇಜಾವರ ಶ್ರೀ ಮಧ್ಯಸ್ಥಿಕೆಗೆ ಮನವಿ
ಉಡುಪಿಯ ಉಚ್ಚಿಲ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹಿಂದೂ ರುದ್ರಭೂಮಿ ವಿಚಾರದಲ್ಲಿ ವಿವಾದ ಎದ್ದಿರುವ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳು ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕೆಂದು ಸ್ಥಳೀಯರು ಮನವಿಮಾಡಿದ್ದಾರೆ.
ಉಡುಪಿ, ಮೇ 25: ಉಡುಪಿಯ ಉಚ್ಚಿಲ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹಿಂದೂ ರುದ್ರಭೂಮಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟವು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ಮಧ್ಯಪ್ರವೇಶಿಸಿ ಈ ವಿವಾದವನ್ನು ಬಗೆಹರಿಸಬೇಕೆಂದು ಕೋರಿದೆ.
ಪತ್ರಕರ್ತರೊಂದಿಗೆ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಒಕ್ಕೂಟದ ಗೌರವಾಧ್ಯಕ್ಷ ಸುಂದರ್ ಮಾಸ್ಟರ್, 'ಬ್ರಿಟಿಷರ ಆಡಳಿತಾವಧಿಯಲ್ಲಿಯೇ 1.56 ಎಕರೆ ಭೂಮಿಯನ್ನು ಅಂದಿನ ಸರಕಾರ ರುದ್ರಭೂಮಿ ನಿರ್ಮಾಣಕ್ಕೆಂದು ಮೀಸಲಿರಿಸಿತ್ತು. ಆದರೆ ನಿರ್ದಿಷ್ಟ ಸಮುದಾಯದ ಕೆಲವು ಮಂದಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಈ ವಿವಾದ ನ್ಯಾಯಾಲಯದ ಮೆಟ್ಟಲೇರಿತ್ತು. ಜಿಲ್ಲಾಡಳಿತವೇ ಈ ವಿವಾದವನ್ನು ಬಗೆಹರಿಸುವಂತೆ ನಿರ್ದೇಶನ ನೀಡಲಾಗಿತ್ತು' ಎಂದು ತಿಳಿಸಿದರು.[250ವರ್ಷಗಳ ನಂತರ ಉಭಯ ಶ್ರೀಗಳ 'ಐತಿಹಾಸಿಕ ಸಮಾಗಮ'ಕ್ಕೆ ಉಡುಪಿ ಸಜ್ಜು]
'ಇದೀಗ ಕೆಲವು ಜಾತೀವಾದಿ ಸಂಘಟನೆಗಳು ಈ ವಿಚಾರವನ್ನು ರಾಜಕೀಯ ಗುರಾಣಿಯನ್ನಾಗಿ ಬಳಸಿಕೊಂಡಿದ್ದು, ಇಲ್ಲಿನ ಸಮುದಾಯದ ನಡುವೆ ಇರುವ ಶಾಂತಿ ಮತ್ತು ಸಾಮರಸ್ಯವನ್ನು ಹಾಳು ಮಾಡುತ್ತಿವೆ. ಉಚ್ಚಿಲ ಮತ್ತು ಎರ್ಮಾಳ್ ಪ್ರದೇಶದ ದಲಿತ ಕಾಲನಿಯ ಮಂದಿ ಸೇರಿದಂತೆ ಎಲ್ಲಾ ಸಮುದಾಯದ ಶವಗಳನ್ನು ಇಲ್ಲಿ ಅಂತಿಮಸಂಸ್ಕಾರ ಮಾಡಲಾಗುತ್ತಿದೆ.[ಅಮೆರಿಕಾದ ಎಡಿಸನ್ ನಲ್ಲಿ ಕೃಷ್ಣಾವತಾರ]
ದಲಿತರ ಮತಯಾಚಿಸುವ ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅವರು ರುದ್ರಭೂಮಿ ವಿಚಾರದಲ್ಲಿ ರಾಜಕೀಯ ಮಾಡುತ್ತಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರುದ್ರಭೂಮಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರ ವಿರುದ್ಧ ಗೂಂಡಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಬೇಕು' ಎಂದು ಸುಂದರ್ ಮಾಸ್ಟರ್ ಆಗ್ರಹಿಸಿದರು.