ಉಡುಪಿಯಲ್ಲಿ ರಾಜ್ಯದಲ್ಲೇ ಎರಡನೇ ಗರಿಷ್ಠ ಕಂಕಣ ಸೂರ್ಯಗ್ರಹಣ ದಾಖಲು
ಉಡುಪಿ, ಡಿಸೆಂಬರ್ 26: ಇಂದು ನಡೆದ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಸಾವಿರಾರು ಜನ ವೀಕ್ಷಿಸಿದರು. ಮುಖ್ಯವಾಗಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಯ ವ್ಯವಸ್ಥೆಯನ್ನು ನಗರದ ಪಿಪಿಸಿ ಕಾಲೇಜಿನಲ್ಲಿ ಮಾಡಲಾಗಿತ್ತು.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಅನಂತಪದ್ಮನಾಭ ಭಟ್ ಮತ್ತು ಅವರ ತಂಡ ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣ ನೋಡುವುದಕ್ಕೆ ತಯಾರಿ ಮಾಡಿತ್ತಲ್ಲದೇ ಈ ಖಗೋಳ ವಿಸ್ಮಯದ ಕುರಿತು ವೈಜ್ಞಾನಿಕ ಮಾಹಿತಿ ನೀಡಿತು. ಈ ಬಾರಿ ಸೂರ್ಯಗ್ರಹಣ ನೋಡದಿದ್ದರೆ ಮತ್ತೆ 2064ರ ವರೆಗೆ ನೋಡುವುದಕ್ಕೆ ಅವಕಾಶ ಇಲ್ಲ. ಹೀಗಾಗಿ ಗರಿಷ್ಠ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ನೀಡುವ ಯೋಜನೆಯನ್ನು ಪೂರ್ಣಪ್ರಜ್ಞಾ ಕಾಲೇಜು ಹಾಕಿಕೊಂಡಿತ್ತು.

ಗ್ರಹಣ ನೋಡಬಾರದು, ಗ್ರಹಣ ಎಂದರೆ ಸೂರ್ಯ- ಚಂದ್ರರಿಗೆ ಬರುವ ಸಂಕಷ್ಟ, ಅದನ್ನು ನೋಡಿದರೆ ನಮಗೂ ಸಂಕಷ್ಟ ಬರುತ್ತದೆ ಎಂಬಿತ್ಯಾದಿಯಾಗಿ ಗ್ರಹಣದ ಬಗ್ಗೆ ಜನರ ಮನಸ್ಸಿನಲ್ಲಿರುವ ಭಾವವನ್ನು ದೂರ ಮಾಡುವ ಪ್ರಯತ್ನ ಮಾಡಿದರು.

ಡಾ.ಎ.ಪಿ. ಭಟ್ ಅವರು ಗ್ರಹಣ ಎಂದರೇನು, ಯಾಕೆ, ಹೇಗೆ ಸಂಭವಿಸುತ್ತದೆ, ಬಾಹ್ಯಾಕಾಶದಲ್ಲಿ ಬೇರೆ ಏನೇನಿದೆ ಇತ್ಯಾದಿಗಳ ಬಗ್ಗೆ ನಿರರ್ಗಳವಾಗಿ ಮಾಹಿತಿ ನೀಡಿದರು. ಬೆಳಿಗ್ಗೆ ಎಂಟೂವರೆ ಸುಮಾರಿಗೆ ಸೇರಿದ್ದ ಜನರು ಹತ್ತೂವರೆವರೆಗೂ ಈ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾದರು. ಅಂದಹಾಗೆ 9.24 ನಿಮಿಷಕ್ಕೆ ರಾಜ್ಯದಲ್ಲೇ ಎರಡನೇ ಗರಿಷ್ಠ ಕಂಕಣ ಗ್ರಹಣ ವೀಕ್ಷಿಸಿದ ಜನ ರೋಮಾಂಚನಗೊಂಡರು.











Click it and Unblock the Notifications