ಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ
ಉಡುಪಿ, ಡಿ 31: 2013ಕ್ಕೆ ವಿದಾಯ ಹೇಳುವ ಮುನ್ನ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ತಿಲಾಂಜಲಿ ಇಡಲು ನಿರ್ಧರಿಸಿದ್ದಾರೆ.
ಮಾಧ್ವ ಸಂಪ್ರದಾಯದಂತೆ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆ ಜನವರಿ 18, 2014ರ ನಸುಕಿನಲ್ಲಿ ನಡೆಯಲಿದೆ. ಕಾಣಿಯೂರು ಶ್ರೀಗಳು ಸರ್ವಜ್ಞ ಪೀಠವೇರಲಿರಲಿದ್ದಾರೆ. ಮಾನವರು ಹೊತ್ತುಕೊಂಡುವ ಹೋಗವ ಪಲ್ಲಕ್ಕಿಯಲ್ಲಿ ಕುಳಿತು ಕೊಳ್ಳದೇ ಇರಲು ಪೇಜಾವರ ಶ್ರೀಗಳು ನಿರ್ಧರಿಸಿದ್ದಾರೆ.
ಪರ್ಯಾಯ ಮೆರವಣಿಗೆಯಂದು ಉಡುಪಿ ಜೋಡುಕಟ್ಟೆ ವೃತ್ತದಿಂದ ರಥಬೀದಿಯವರೆಗೆ ಅಷ್ಠ ಮಠಾಧೀಶರು ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಬರುವ ಪದ್ದತಿಯಿದೆ. ಮೊಗವೀರ ಸಮುದಾಯದವರು ಶ್ರೀಗಳು ಕೂತಿರುವ ಪಲ್ಲಕ್ಕಿಯನ್ನು ಹೊರುವುದು ಈಗಿರುವ ಪದ್ದತಿ.

ಉಡುಪಿಯ ಪಾಜಕ ಕ್ಷೇತ್ರದಲ್ಲಿ ಸೋಮವಾರ (ಡಿ 30) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಶ್ರೀಗಳು, ನಾನು ಭಕ್ತರು ಹೊರುವ ಪಲ್ಲಕ್ಕಿಯಲ್ಲಿ ಇನ್ನು ಮುಂದೆ ಕುಳಿತು ಕೊಳ್ಳುವುದಿಲ್ಲ. ಜೀಪಿನಲ್ಲಿ ಪಲ್ಲಕ್ಕಿ ಇರಿಸಿ ಅದರಲ್ಲಿ ಕುಳಿತು ಬರುತ್ತೇನೆ. ಈ ಸಂಬಂಧ ಅನ್ಯ ಶ್ರೀಗಳಿಗೆ ನಾನು ಒತ್ತಡ ಹೇರುವುದಿಲ್ಲ ಎಂದು ಹೇಳಿದ್ದಾರೆ.
ಮನುಷ್ಯರು ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಕೊಳ್ಳುವುದು ಮಾನವೀಯತೆಗೆ ವಿರುದ್ದ. ನನ್ನ ನಿರ್ಧಾರಕ್ಕೆ ಪಲಿಮಾರು ಮತ್ತು ಕಾಣಿಯೂರು ಶ್ರೀಗಳು ಸಹಮತ ವ್ಯಕ್ತ ಪಡಿಸಿದ್ದಾರೆ. ಜೀಪಿನಲ್ಲಿ ಪಲ್ಲಕ್ಕಿ ಇಟ್ಟು ಅದರಲ್ಲಿ ಕೂತು ಬಂದರೆ ಸಂಪ್ರದಾಯಜ್ಜೆ ಧಕ್ಕೆಯಾಗುವುದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಪ್ರಗತಿಪರರಿಂದ ವಿರೋಧ ವ್ಯಕ್ತವಾಗುವ ಮುನ್ನವೇ ಪಲ್ಲಕ್ಕಿ ಹೊರುವ ಪದ್ದತಿಯಲ್ಲಿ ಮಾರ್ಪಾಡು ಮಾಡಲು ಮುಂದಾಗಿದ್ದೇವೆ. ನಮ್ಮ ಮಠದ ಅಧೀನದಲ್ಲಿರುವ ಉಡುಪಿ ಮುಚ್ಚಿಲಕೋಡು ಸುಬ್ರಮಣ್ಯ ದೇವಾಲಯದಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ಪದ್ದತಿಯನ್ನು ಈಗಾಗಲೇ ಜಾರಿಗೆ ತಂದಿದ್ದೇವೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಗುಲ್ಬರ್ಗ ಜಿಲ್ಲೆ ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ದಸರಾ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications