ಉಡುಪಿ: ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಬಾಲಕಿ ಬಲಿ
ಉಡುಪಿ, ಮೇ 05 : ಜಿಲ್ಲೆಯ ಕೆದಿಂಜೆ ಬೋಳ ಕ್ರಾಸ್ ನಲ್ಲಿನ ಮನೆಯೊಂದರಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮಾಡಿದ ಹುಚ್ಚಾಟಕ್ಕೆ ಒಂಭತ್ತು ವರ್ಷದ ಕಂದಮ್ಮ ಬಲಿಯಾಗಿದ್ದಾಳೆ
ಮೇ 01ರ ಬೆಳಗ್ಗಿನ ಜಾವ ಮನೆಯೊಂದಕ್ಕೆ ದಾರಿಹೋಕ ಮಾನಸಿಕ ಅಸ್ವಸ್ಥನೊಬ್ಬ ನುಗ್ಗಿ ಮೂವರ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೇರಳಕಟ್ಟೆ ನಿವಾಸಿ ರಮೇಶ್ ಶೆಟ್ಟಿ ಎಂಬವರ ಪುತ್ರಿ ಮಾನ್ವಿ (9) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾಳೆ.[ಮಾನಸಿಕ ಅಸ್ವಸ್ಥನಿಂದ ಮೂವರ ಮೇಲೆ ಹಲ್ಲೆ, ಬಾಲಕಿ ಸ್ಥಿತಿ ಗಂಭೀರ]
ಮಾನಸಿಕ ಅಸ್ವಸ್ಥ ನಡೆಸಿದ ಮಾರಣಾಂತಿಕ ಹಲ್ಲೆಯಲ್ಲಿ ರೋಹಿಣಿ (60), ಸ್ವಪ್ನ(40), ಮಾನ್ವಿ(9) ಎಂಬವರು ಈ ಘಟನೆಯಲ್ಲಿ ಗಾಯಗೊಂಡಿದ್ದರು.
ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ನೀಲಾಧಾರ ಅಲಿಯಾಸ್ ಉಮೇಶ್ (40) ಪ್ರಕರಣದ ಆರೋಪಿಯಾಗಿದ್ದಾನೆ. ಕೆಲ ವರ್ಷಗಳಿಂದ ಈತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ.
ನಾಲ್ಕು ವರ್ಷಗಳ ಹಿಂದೆ ಕೌಟುಂಬಿಕ ಆಸ್ತಿ ಹಂಚಿಕೆಯಾದ ಬಳಿಕ ಸಹೋದರಿ ಹಾಸನದ ರುಕ್ಮಣಿ ಎಂಬವರ ಮನೆಯಲ್ಲಿ ನೆಲೆಸಿದ್ದ ಉಮೇಶ್, ಕಳೆದ ಎರಡು ತಿಂಗಳ ಹಿಂದೆ ಮನೆಗೆ ಹೋಗಿ ಬರುತ್ತೇನೆಂದು ಹೊರಟು ಹೋದವನು ನಾಪತ್ತೆಯಾಗಿದ್ದನು.