ಕ್ಲಿನಿಕ್, ನರ್ಸಿಂಗ್ ಹೋಂ ಮುಚ್ಚುವಂತಿಲ್ಲ: ಉಡುಪಿ ಡಿಸಿ ವಾರ್ನಿಂಗ್
ಉಡುಪಿ, ಮಾರ್ಚ್ 28: ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಲ್ಲಿ ಮುಚ್ಚಲಾಗಿರುವ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ತಕ್ಷಣವೇ ತೆರೆಯಬೇಕು ಎಂದು ಆದೇಶಿಸಿದ್ದಾರೆ.
Recommended Video
ಜನರಿಗೆ ಈಗ ಆರೋಗ್ಯ ಸೇವೆಯ ಅಗತ್ಯ ತುಂಬಾ ಇದೆ. ಪರಿಸ್ಥಿತಿ ಹದಗೆಟ್ಟಿರುವಾಗ ನರ್ಸಿಂಗ್ ಹೋಮ್ ಗಳನ್ನು ಮುಚ್ಚಿ ಇಟ್ಟಿರುವುದು ಸರಿಯಲ್ಲ. ಕೂಡಲೇ ಆಸ್ಪತ್ರೆಗಳನ್ನು ತೆರೆದು ಸಾರ್ವಜನಿಕರ ಸೇವೆಗೆ ಸಿದ್ಧವಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಯಮಕ್ಕೆ ತಪ್ಪಿದರೆ ಅಂಥವರ ವಿರುದ್ಧ ಕೆಪಿಎಂಎ ಆಕ್ಟ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ನೀಡಲಾಗಿರುವ ಲೈಸೆನ್ಸ್ ಅನ್ನೂ ರದ್ದು ಮಾಡುತ್ತೇವೆ. ಹಲವು ಕಡೆ ನರ್ಸಿಂಗ್ ಹೋಮ್ ಮತ್ತು ಕ್ಲಿನಿಕ್ ಗಳು ಬಾಗಿಲು ಹಾಕಿರುವ ದೂರು ಬಂದಿರುವುದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಈ ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭ, ಕೊರೊನಾ ವೈರಸ್ ಸೋಂಕಿತರು ಸುತ್ತಾಡಿದರೆ ಉಗ್ರ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ವಿದೇಶದಿಂದ ಬಂದವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಇವರು ಸರಕಾರದ ಆದೇಶ ಉಲ್ಲಂಘಿಸಿ ಸುತ್ತಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಕ್ವಾರಂಟೈನ್ ಗಳಿರುವ
ಒಂದೊಂದು ಮನೆಗೆ ಮೂರು ಮೂರು ಬಾರಿ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.
"ಹೋಂ ಕ್ವಾರಂಟೈನ್ ನಲ್ಲಿ ಇರುವವರು ಹೊರಗೆ ಸುತ್ತಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆದೇಶ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಕಾನೂನು ಮೀರಿದರೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿ ವಿದೇಶ ಪ್ರಯಾಣ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1100 ಮಂದಿ ಗೃಹ ಬಂಧನದಲ್ಲಿ ಇದ್ದಾರೆ.

ಕೃಷ್ಣನಗರಿಯಲ್ಲಿ ರಾಸಾಯನಿಕ ಸಿಂಪಡಣೆ: ಉಡುಪಿಯಲ್ಲಿ ಒಂದೆಡೆ ಕೊರೊನಾ ಭೀತಿಯಾದರೆ, ಮತ್ತೊಂದೆಡೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಭಯ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ನಗರಪಾಲಿಕೆ ಮತ್ತು ಅಗ್ನಿಶಾಮಕ ದಳದ ವತಿಯಿಂದ ಎಲ್ಲ 35 ವಾರ್ಡ್ ಗಳಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.












Click it and Unblock the Notifications