ಮುಂದಿನ ವಾರದಲ್ಲಿ ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ?
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮುಂದಿನ ನಡೆ ಏನು ಎಂಬುದೇ ಎಲ್ಲರಿಗೆ ಯಕ್ಷಪ್ರಶ್ನೆಯಾಗಿದೆ. ಕಳೆದ ಆರು ತಿಂಗಳಿನಿಂದ ಇವರ ರಾಜಕೀಯ ನಿಲುವು ಏನೆಂಬುದು ಅವರ ಆಪ್ತ ವರ್ಗಕ್ಕೂ ಗೊತ್ತಿಲ್ಲ. ಇದೇ ಬೆನ್ನಲ್ಲೇ ಹೆಗ್ಡೆ ಬಿಜೆಪಿ ಸೇರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಅಭಿಮಾನಿಗಳು..!
ಇದಕ್ಕೆ ಪುರಾವೆ ಎಂಬಂತೆ ಮೊನ್ನೆ ಬ್ರಹ್ಮಾವರದ ಖಾಸಗಿ ಹೊಟೇಲ್ ನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಶೇಕಡಾ 85 ರಷ್ಟು ಅಭಿಮಾನಿಗಳು ಬಿಜೆಪಿ ಸೇರುವಂತೆ ಮನವಿ ಮಾಡಿದ್ದಾರೆ. ಕೇವಲ ಶೇಕಡಾ 10ರಷ್ಟು ಅಭಿಮಾನಿಗಳು ಮಾತ್ರ ಕಾಂಗ್ರೆಸ್ ನಲ್ಲೇ ಇರಿ ಎಂದು ಹೇಳಿದ್ದಾರೆ. ಶೇಕಡಾ ಐದರಷ್ಟು ಮಂದಿ ಜೆಡಿಎಸ್ ನಲ್ಲಿ ಇರಿ ಎಂದು ಅನಿಸಿಕೆ ವ್ಯಕ್ತಪಡಿಸಿದ್ದರು.[ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ]
ಇದೇ ಸಭೆಯಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ನಾನೇನು ಕಾಂಗ್ರೆಸ್ ನಿಂದ ಹೊರಗೆ ಬಂದಿಲ್ಲ. ಅವರೇ ನನ್ನ ಮೇಲೆ ಗೂಬೆ ಕೂರಿಸಿ ಹೊರಗಟ್ಟಿದ್ದಾರೆ. ಮತ್ತ್ಯಾಕೆ ನಾನು ಕಾಂಗ್ರೆಸ್ ಗೆ ಸೇರಬೇಕು..? ಎಂದು ಅಭಿಮಾನಿಗಳ ಬಳಿ ಪ್ರಶ್ನೆ ಕೂಡಾ ಮಾಡಿದ್ದರು.

ನಿಮ್ಮ ಮುಂದಿನ ರಾಜಕೀಯ ನಡೆ ಏನು ಎಂದು ನಿಮ್ಮ ' ಒನ್ ಇಂಡಿಯಾ ' ಜಯಪ್ರಕಾಶ್ ಹೆಗ್ಡೆ ಅವರನ್ನ ಸಂಪರ್ಕಿಸಿ ಅನಿಸಿಕೆ ಕೇಳಿತು. ಈ ವೇಳೆ ಒನ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಹೆಗ್ಡೆ, ' ಇದೇ ಡಿಸೆಂಬರ್ 17,18 ರಂದು ಚಿಕ್ಕಮಗಳೂರಲ್ಲಿ ಮತ್ತೆ ಸಭೆ ನಡೆಸುತ್ತೇನೆ. ಅಲ್ಲಿ ಅಭಿಮಾನಿಗಳ, ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹಾದಿ ಯಾವುದೆಂಬುದರ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಅಧಿಕೃತ ಘೋಷಣೆ ಮಾಡುತ್ತೇನೆ..' ಅಂದರು.[ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನಪ್ರಿಯ ನಾಯಕ ಬಿಜೆಪಿಗೆ]
ಇಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರುತ್ತಾರ..? ಇಲ್ವಾ..? ಎಂಬ ಗೊಂದಲದ ಮಧ್ಯೆ ಕಳೆದ ವಾರ ಇವರ ನೂರಾರು ಅಭಿಮಾನಿಗಳು ಉಡುಪಿಯ ಮೂಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ರಾಜಕೀಯ ಹಿನ್ನೆಲೆ ಏನು..?
1952, ಆಗಸ್ಟ್ 16 ರಂದು ಜನಿಸಿದ ಹೆಗ್ಡೆ ಕುಂದಾಪುರದ ಕೊರ್ಗಿ ತಾಲೂಕಿನವರು. ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ ಹೆಗ್ಡೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ. ಚಂದ್ರಶೇಖರ ಹೆಗ್ಡೆ ಪುತ್ರ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2012 ರ ಉಪಚುನಾವಣೆ ಮೂಲಕ ಸಂಸತ್ ಪ್ರವೇಶಿಸಿದರು. 1997 ರಲ್ಲಿ ಮೀನುಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2009 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸಿದ್ದರು. ತದನಂತರ ಬಿಜೆಪಿಯ ಡಿ.ವಿ. ಸದಾನಂದ ಗೌಡ ರಾಜ್ಯದ ಸಿಎಂ ಆಗಿ ಆಯ್ಕೆಯಾದರು. ಈ ವೇಳೆ ತೆರವಾದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದರು. ಸದ್ಯದ ಬೆಳವಣಿಗೆಗಳನ್ನ ನೋಡಿದಾಗ ಜಯಪ್ರಕಾಶ್ ಹೆಗ್ಡೆ ಜೆಡಿಎಸ್ ಗಿಂತ ಬಿಜೆಪಿ ಪಕ್ಷದತ್ತ ಒಲವು ಹೊಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications