ಉಡುಪಿ ಗುಜರಿ ಅಂಗಡಿಯಲ್ಲಿ ಸ್ಫೋಟ; ಒಂದು ಜೀವ ಉಳಿಸಿದ ನೀರು!
ಉಡುಪಿ, ಮಾರ್ಚ್ 21; ಉಡುಪಿಯ ಕಾಪು ತಾಲೂಕಿನ ಮಲ್ಲಾರಿನ ಗುಜುರಿ ಅಂಗಡಿಯಲ್ಲಿ ನಡೆದ ಸಿಲಿಂಡ್ ಸ್ಫೋಟಕ್ಕೆ ಮೂವರು ಬಲಿಯಾಗಿದ್ದಾರೆ. ಮಲ್ಲಾರು ಫಕೀರನಕಟ್ಟೆ ಮಸೀದಿ ಬಳಿಯ ಗುಜುರಿ ಅಂಗಡಿ ಇದಾಗಿದ್ದು, ಸಾಗರ ಮೂಲದ ನಿಯಾಜ್, ಮಲ್ಲಾರು ನಿವಾಸಿ ರಜಾಬ್, ಚಂದ್ರನಗರ ನಿವಾಸಿ ರಜಾಬ್ ಸಾವನ್ನಪ್ಪಿದ್ದಾರೆ.
ಮೃತಪಟ್ಟಿರುವ ಮಲ್ಲಾರು ನಿವಾಸಿ ರಜಾಬ್ ಎಂಬುವವರಿಗೆ ಸೇರಿದ ಗುಜರಿ ಮಳಿಗೆ ಇದಾಗಿದೆ. ಗುಜುರಿ ಅಂಗಡಿಯಲ್ಲಿ ಒಟ್ಟು 8 ಮಂದಿ ಕೆಲಸ ಮಾಡುತ್ತಿದ್ದರು. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಜೀವ ದಹನವಾದರೆ, ನಿಯಾಜ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ.
ಈ ಗುಜುರಿ ಅಂಗಡಿಗೆ ಮೀನುಗಾರಿಗಾ ಬೋಟ್ಗಳು ಅತೀ ಹೆಚ್ಚಾಗಿ ಬರುತ್ತಿದ್ದು, ಬೋಟ್ನ ಅವಶೇಷದಲ್ಲಿದ್ದ ಡ್ರಮ್ ರೀತಿಯ ಸಿಲಿಂಡರನ್ನು ಗ್ಯಾಸ್ ಕಟ್ಟರ್ ಮೂಲಕ ಒಡೆಯುತ್ತಿದ್ದಾಗ ನಡೆದ ಸ್ಪೋಟ ಇದಾಗಿದೆ. ಉಡುಪಿ ಅಗ್ನಿಶಾಮಕದಳ ಹಾಗೂ ISPRL ಅಗ್ನಿಶಾಮಕ ದಳ ಸತತ ಕಾರ್ಯಾಚರಣೆ ಫಲವಾಗಿ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹಬ್ಬುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

ಘಟನೆಯ ಬಗ್ಗೆ ಗುಜುರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನುರೂಲ್ ಇಸ್ಲಾಂ ಪ್ರತಿಕ್ರಿಯೆ ನೀಡಿದ್ದಾರೆ, "ನಾನು ನೀರು ಕುಡಿಯಲು ಹೋದಾಗ ದೊಡ್ಡ ಸಿಲಿಂಡರ್ ರೀತಿಯ ಡ್ರಮ್ ಗ್ಯಾಸ್ ಕಟ್ಟರ್ ಮೂಲಕ ಒಡೆಯುವ ಕೆಲಸ ನಡೆಯುತ್ತಿತ್ತು. ನೀರು ಕುಡಿಯುವ ವೇಳೆ ದೊಡ್ಡ ಸ್ಪೋಟದ ಸದ್ದು ಕೇಳಿತು. ಹೊರಬಂದ ಕೂಡಲೇ ಸುತ್ತಲೂ ಏಕಾಏಕಿ ಬೆಂಕಿಯ ಕೆನ್ನಾಲಿಗೆ ಆವರಿಸಿತು. ನಾನು ಓಡಿ ಹೋಗಿ ತಪ್ಪಿಸಿಕೊಂಡೆ" ಎಂದು ಹೇಳಿದ್ದಾರೆ.
ಈ ಗುಜರಿ ಅಂಗಡಿಯಲ್ಲಿ ಕಬ್ಬಿಣದ ಪರಿಕರಗಳನ್ನು ತುಂಡರಿಸಲು ಕಟ್ಟಿಂಗ್ ಮಿಷನ್ ಇರಿಸಲಾಗಿತ್ತು. ಇದಕ್ಕೆ ಬಳಸುವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿರುವ ಸಾಧ್ಯತೆಯೂ ಇರಬಹುದು ಅಂತಾ ಸ್ಥಳೀಯರು ಅಂದಾಜಿಸಿದ್ದಾರೆ.

ಅಲ್ಲದೇಈ ಗುಜರಿ ಅಂಗಡಿಯಲ್ಲಿ ಮೀನುಗಾರಿಕಾ ಬೋಟ್ಗಳ ಅವಶೇಷಗಳಿತ್ತು. ಈ ಅವಶೇಷದಲ್ಲಿ ಇದ್ದ ಸಿಲಿಂಡರ್ ರೀತಿಯ ಡ್ರಮ್ ತುಂಡರಿಸುವ ವೇಳೆ ಗ್ಯಾಸ್ ಹೊರಹೊಮ್ಮಿ ಸ್ಪೋಟ ನಡೆದ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ. ಜನರು ಸಹ ಬೆಂಕಿ ನಂದಿಸಲು ಸಹಕಾರ ನೀಡಿದರು.
ಇನ್ನು ಘಟನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಸ್ಥಳೀಯ ನಿವಾಸಿ ಅನ್ವರ್ ಆಲಿ, "ಘಟನೆ ನಡೆದ ತಕ್ಷಣವೇ ಅಗ್ನಿಶಾಮಕದಳವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ಥಳೀಯವಾಗಿ ಕಾರ್ಯಾಚರಿಸುವ ಕಚ್ಚಾ ತೈಲ ಸಂಗ್ರಹಗಾರ ಐಎಸ್ಪಿಆರ್ಎಲ್ ಕಂಪನಿಯಿಂದ ಫೈಯರ್ ಇಂಜಿನ್ ತರಿಸಲಾಗಿದೆ. ಬಳಿಕ ಸಾರ್ವಜನಿಕರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಹಾಯ ಪಡೆದು ಹಬ್ಬುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ" ಎಂದರು.
ಗುಜರಿ ಅಂಗಡಿಯಲ್ಲಿ ತುಂಬಾ ಹಳೆಯ ಫ್ರಿಜ್ಜು, ಟಿವಿ ಇತ್ಯಾದಿ ವಸ್ತುಗಳಿದ್ದು ನಿರಂತರ ಸ್ಫೋಟದ ಸದ್ದುಗಳು ಕೇಳಿ ಬರುತ್ತಿದ್ದವು. ಅಕ್ಕಪಕ್ಕದಲ್ಲಿ ಹತ್ತಾರು ಮನೆಗಳಿದ್ದು ಅಗ್ನಿಶಾಮಕದಳದ ತುರ್ತು ಕಾರ್ಯಾಚರಣೆಯಿಂದ ದೊಡ್ಡ ಅವಘಡ ತಪ್ಪಿದೆ. ಮೃತರೆಲ್ಲರು ಬಡವರು, ಅವರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications