ಅಪಘಾತವಾದ ಕಾರನ್ನು 1ಕಿ.ಮೀ ಎಳೆದೊಯ್ದ ಟಿಪ್ಪರ್: ಎದೆಝಲ್ ಎನಿಸುವ ದೃಶ್ಯ
ಉಡುಪಿ, ಜುಲೈ 17: ಅಪಘಾತದ ಬಳಿಕ ವಾಹನ ನಿಲ್ಲಿಸದ ಚಾಲಕ ಟಿಪ್ಪರ್ಗೆ ಸಿಲುಕಿದ ಕಾರನ್ನು ಕಿಲೋಮೀಟರ್ ದೂರು ಎಳೆದೊಯ್ದಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಹಾಗೂ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಟಿಪ್ಪರ್ ನಿಲ್ಲಿಸಿದರೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳಬಹುದು ಎನ್ನುವ ಭಯದಲ್ಲಿ ಟಿಪ್ಪರ್ ಚಾಲಕ ಗಾಡಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ.

ಕಾರಿನ ಬಂಪರ್ಗೆ ಟಿಪ್ಪರ್ ಸಿಲುಕಿದ್ದರೂ ಕಾರು ಸಮೇತ ಟಿಪ್ಪರ್ ಚಲಿಸಿದ್ದು, ಚಾಲಕ ವಾಹನದ ವೇಗ ಹೆಚ್ಚಿಸಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಟಿಪ್ಪರ್ ಓವರ್ ಟೇಕ್ ಮಾಡಿ ಚಾಲಕನಿಗೆ ಬೈದು ವಾಹನ ನಿಲ್ಲಿಸಿದ್ದಾರೆ. ಟಿಪ್ಪರ್ ಚಾಲಕ ಸುಮಾರು ಒಂದು ಕಿಲೋ ಮೀಟರ್ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ಗೊತ್ತಿಲ್ಲದೇ ವೇಗವಾಗಿ ವಾಹನ ಚಲಾಯಿಸಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಟಿಪ್ಪರ್ ಅನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದು, ಗಾಯಾಳುಗಳಿಂದ ಮಾಹಿತಿ ಪಡೆದು ಕೇಸು ದಾಖಲಿಸಲು ನಿರ್ಧರಿಸಿದ್ದಾರೆ. ಟಿಪ್ಪರ್ ಕಾರನ್ನು ಎಳೆದೊಯ್ದಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೋಡುಗರ ಎದೆ ಝಲ್ ಎನಿಸುವಂತಿದೆ.
ಉಯ್ಯಾಲೆಯ ಸೀರೆ ಬಿಗಿದು ಬಾಲಕ ದಾರುಣ ಸಾವು
ಬೆಳ್ತಂಗಡಿ: ಉಯ್ಯಾಲೆಯ ಸೀರೆ ಬಿಗಿದು ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಶ್ರೀಷಾ(14) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಶ್ರೀಷಾ ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ ಸೀರೆಯಲ್ಲಿ ಮಾಡಿದ ಉಯ್ಯಾಲೆಯಲ್ಲಿ ಆಡುತ್ತಿದ್ದ, ಮನೆಯಲ್ಲಿ ಯಾರೂ ಇಲ್ಲದಾಗ ಏಕಾಏಕಿ ಬಾಲಕನ ಕುತ್ತಿಗೆಗೆ ಉಯ್ಯಾಲೆಯ ಸೀರೆ ಬಿಗಿದಿದೆ. ತಪ್ಪಿಸಲು ಯಾರೂ ಇಲ್ಲದೇ, ಬಾಲಕನಿಗೆ ತಪ್ಪಿಸಿಕೊಳ್ಳಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮನೆಯವರು ಬಂದಾಗ ಬಾಲಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ನಡೆದಿದೆ.












Click it and Unblock the Notifications