ರಾಮಜನ್ಮಭೂಮಿ ವಿವಾದ: ಉಡುಪಿ 'ಧರ್ಮ ಸಂಸದ್'ಗೆ ರವಿಶಂಕರ್ ಗೈರು
ಉಡುಪಿ, ನವೆಂಬರ್ 25: ನಗರದಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ನಿಂದ 'ಆರ್ಟ್ ಆಫ್ ಲಿವಿಂಗ್' ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ದೂರ ಉಳಿದಿದ್ದಾರೆ.
ಶುಕ್ರವಾರ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಧರ್ಮ ಸಂಸದ್ ನಲ್ಲಿ ಮಾತನಾಡಿ ಪರೋಕ್ಷವಾಗಿ ಶ್ರೀ ಶ್ರೀ ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ಧರ್ಮ ಸಂಸದ್ ಗೆ ಗೈರಾಗಲು ರವಿಶಂಕರ್ ನಿರ್ಧರಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಈ ಧರ್ಮ ಸಂಸದ್ ನಲ್ಲಿ ಪಾಲ್ಗೊಳ್ಳುವಂತೆ ಶ್ರೀ ಶ್ರೀ ರವಿಶಂಕರ್ ನ್ನು ಆಹ್ವಾನಿಸಲಾಗಿತ್ತು. ಅವರೂ ಇದರಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಆದರೆ ಇದೀಗ ತಮ್ಮ ನಿರ್ಧಾರದಿಂದ ರವಿಶಂಕರ್ ಹಿಂದೆ ಸರಿದಿದ್ದಾರೆ.

ಶುಕ್ರವಾರ ಧರ್ಮ ಸಂಸದ್ ನಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ಶ್ರೀ ಶ್ರೀ ಹೆಸರು ಹೇಳದೇ ಅವರನ್ನು ಟೀಕಿಸಿದ್ದರು. "ಪ್ರಖ್ಯಾತ ವ್ಯಕ್ತಿಯೊಬ್ಬರಿದ್ದಾರೆ. ಅವರ ಬಗ್ಗೆ ನಾವು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ. ಅವರು ಸಂಧಾನದ ಭಾಗವಾಗಿದ್ದಾರೆ. ಅವರು ಬಂದು ನನ್ನನ್ನು ಭೇಟಿಯಾಗಿ ಈ ಸಂಬಂಧ (ರಾಮ ಜನ್ಮಭೂಮಿ) ಮಾತುಕತೆ ನಡೆಸಿದರು. ನಾನು ಇದು ಯಾವತ್ತೂ ನಮ್ಮ ಕೆಲಸ ಅಲ್ಲ ಎಂದು ಹೇಳಿದೆ. ಅವರು ನನ್ನ ಮಾತು ಕೇಳಲಿಲ್ಲ. ನಾನು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಅವರು ಈ ಸಂಬಂಧ ನಿರ್ಣಯ ಮಂಡಿಸಿದರು. ಈ ವಿವಾದದಲ್ಲಿ ತೀರ್ಮಾನ ತೆಗೆದುಕೊಳ್ಳಲು ಧರ್ಮ ಸಂಸದ್ ಇದೆ," ಎಂದು ಭಾಗವತ್ ಹೇಳಿದರು.
ಇನ್ನು ಈ ವಿವಾದದ ಬಗ್ಗೆ ಮಾತನಾಡಿದ ಭಾಗವತ್, "ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರವನ್ನೇ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಬೇರೇನನ್ನೂ ನಿರ್ಮಾಣ ಮಾಡಲಾಗುವುದಿಲ್ಲ. ಮೂಲ ಮಾದರಿಯಲ್ಲಿ ಅದೇ ಕಲ್ಲುಗಳಿಂದ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ," ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
"ರಾಮ ಜನ್ಮ ಭೂಮಿ ಹೋರಾಟವನ್ನು ನಿರಂತರ 20-25 ವರ್ಷ ಮುನ್ನಡೆಸಿದವರ ನೇತೃತ್ವದಲ್ಲೇ ಇದನ್ನು ನಿರ್ಮಾಣ ಮಾಡಲಾಗುತ್ತದೆ," ಎಂದೂ ಭಾಗವತ್ ಹೇಳಿದ್ದಾರೆ. ಈ ಮೂಲಕ ಅವರು ಶ್ರೀ ಶ್ರೀ ಸಂಧಾನ ಸೂತ್ರವನ್ನು ತಳ್ಳಿ ಹಾಕಿದ್ದಾರೆ.












Click it and Unblock the Notifications