ವಿವಾಹಿತ ಮಹಿಳೆಯ ಸಾವು, ಶ್ರೀ ರಾಮ ಸೇನೆ ನಾಯಕ ಅಂದರ್
ಮೂವರು ಆರೋಪಿಗಳನ್ನು ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಆಂತೋನಿ ನೇತೃತ್ವದ ಪೋಲೀಸರ ತಂಡ ಬಂಧಿಸಿದೆ. ಇವರಲ್ಲಿ ಸುರೇಖಾ ಸಾವಿಗೆ ಪ್ರಚೋದಿಸಿದ ಆರೋಪ ಶ್ರೀ ರಾಮ ಸೇನೆ ನಾಯಕ ರೋಶನ್ ಕೋಟ್ಯಾನ್ ಇರ್ವತ್ತೂರು ಮೇಲಿದೆ.
ಉಡುಪಿ, ಏಪ್ರಿಲ್ 28: ಮೂಡಬಿದಿರೆ ಕಾಂತಾವರದ ಸುರೇಖಾ ಪೂಜಾರಿ ಸಾವಿಗೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ ಸೇನೆ ನಾಯಕ ರೋಶನ್ ಕೋಟ್ಯಾನ್ ಇರ್ವತ್ತೂರು, ಹಾಗೂ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ.
ಮೂವರು ಆರೋಪಿಗಳನ್ನು ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಆಂತೋನಿ ನೇತೃತ್ವದ ಪೋಲೀಸರ ತಂಡ ಬಂಧಿಸಿದೆ. ಬಂಧಿತ ಸಂಬಂಧಿಕರು ಭಾರತಿ ಮತ್ತು ಶೋಭಾ ಆಗಿದ್ದು ಸುರೇಖಾ ಪತಿಯ ಇಬ್ಬರು ಸಹೋದರರ ಪತ್ನಿಯರಾಗಿದ್ದಾರೆ.[ಉಡುಪಿ ತಾಯಿ-ಮಗ ಸಾವು: ಕ್ವಾರಿ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಕೇಸು]

ಯಾರು ಈ ಸುರೇಖಾ?
ಮೂಡಬಿದಿರೆ ಕೋಟೆಬಾಗಿಲು ನಿವಾಸಿ ಸಂಜೀವ ಸುವರ್ಣ ಎಂಬವರ ಮಗಳು ಸುರೇಖಾ (28) ಎಂಬಾಕೆ ಏಪ್ರಿಲ್ 25ರ ಮಂಗಳವಾರ ಮಧ್ಯಾಹ್ನದ ಸುಮಾರು 2ರ ವೇಳೆಗೆ ಮನೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅವರನ್ನು ಐದು ವರ್ಷಗಳ ಹಿಂದೆ ಕಾಂತಾವರದ ನಿವಾಸಿ ಪ್ರಕಾಶ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರಸ್ತುತ ಅವರಿಗೆ ನಾಲ್ಕು ವರ್ಷದ ಒಂದು ಗಂಡು ಮಗುವಿದೆ.
ಗಂಡ ಹಾಗೂ ಅವರ ಮನೆಯವರೊಂದಿಗೆ ಕಾಂತವರದ ಪತಿಯ ಮನೆಯಲ್ಲಿ ವಾಸವಾಗಿದ್ದಾಗ ಮಧ್ಯಾಹ್ನದ ಹೊತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಆಕೆಯನ್ನು ಮೂಡಬಿದಿರೆ ಆಳ್ವಾಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಈ ಸಂದರ್ಭ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದರು.[ಉಡುಪಿ: ಕೊರಗ ಕುಟುಂಬದ ಮೇಲೆ ಗೋ ರಕ್ಷಕರ ದಾಳಿ]
ಸುರೇಖಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಹೋದರ ಮೂಡಬಿದಿರೆ ಕೋಟೆಬಾಗಿಲು ನಿವಾಸಿ ಸುರೇಶ ಈ ಬಗ್ಗೆ ಇಲ್ಲಿನ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.
ಚುರುಕುಗೊಂಡ ತನಿಖೆ
ಮೂಲಗಳ ಪ್ರಕಾರ ಸುರೇಖಾ ಸಾವಿನ ಹಿಂದೆ ಪತಿ ಮನೆಯವರ ಹೆಸರು ಕೇಳಿಬರುತ್ತಿದೆ. ಸುರೇಖಾರ ಪತಿ ಪ್ರಕಾಶ್ ಮಂಗಳೂರಿನಲ್ಲಿ ರಿಕ್ಷಾ ಶೋರೂಂನಲ್ಲಿ ಉದ್ಯೋಗಿಯಾಗಿದ್ದು ಪತಿ-ಪತ್ನಿ ಸಂಬಂಧ ಅನೋನ್ಯವಾಗಿತ್ತೆನ್ನಲಾಗಿದೆ.

ಆದರೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಸುರೇಖಾ ಗಂಡನ ಸಹೋದರರ ಪತ್ನಿಯಂದಿರಾದ ಶೋಭಾ ಹಾಗೂ ಭಾರತಿಯವರ ಉದ್ಧಟತನದ ನಡವಳಿಕೆ ಸುರೇಖಾಳ ಬದುಕನ್ನೆ ಹಾಳು ಮಾಡಿದೆ ಎಂಬ ಅಂಶ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದು ತನಿಖೆ ನಡೆಸಿದಾಗ ಹೊರಬಿದ್ದಿದೆ.
ಅನೈತಿಕ ವ್ಯವಹಾರ ಕಣ್ಣಾರೆ ಕಂಡಾಗ
ಪತಿಯ ಮನೆಯಲ್ಲಿ ಪ್ರಕಾಶ್ ಸಹೋದರರ ಹೆಂಡತಿಯರು ರೋಶನ್ ಕೋಟ್ಯಾನ್ ಜತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದನ್ನು ಮೃತ ಸುರೇಖಾ ಕಣ್ಣಾರೆ ಕಂಡಿದ್ದು, ಈ ವಿಚಾರ ಆರೋಪಿ ರೋಶನ್ ಕೋಟ್ಯಾನ್ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಖಾ ತನ್ನ ಗಂಡನಲ್ಲೂ ವಿಚಾರ ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಬಳಿಕ ಸುರೇಖಾಳ ಮೊಬೈಲ್ ಗೆ ಆರೋಪಿ ರೋಶನ್ ಕೋಟ್ಯಾನ್ ಆಗ್ಗಿಂದಾಗೆ ಬೆದರಿಕೆ ಕರೆಯೊಡ್ಡುತ್ತಿದ್ದನು. ಅನೈತಿಕ ವಿಚಾರವನ್ನು ಬಹಿರಂಗಪಡಿಸಿದಲ್ಲಿ ಗಂಡ, ಮಗು ಸಹಿತ ಮೂವರನ್ನು ಕೊಲೆ ನಡೆಸುವುದಾಗಿ ಜೀವ ಬೆದರಿಕೆಯೊಡ್ಡುತ್ತಿದ್ದನು ಎಂದು ತಿಳಿದುಬಂದಿದೆ.
ಇದೇ ವಿಚಾರವನ್ನು ಬರೆದಿರುವ ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ. ಮಾತ್ರವಲ್ಲದೇ ಆಕೆಯ ಮೊಬೈಲ್ ಧ್ವನಿ ಮುದ್ರಣದಲ್ಲಿ ದಾಖಲಾಗಿದ್ದು ತನಿಖೆಗೆ ಪೂರಕವಾಗುವಂತೆ ಮೊಬೈಲ್ ಅನ್ನು ಪೊಲೀಸರು ವಶಪಡಿಸಿದ್ದಾರೆ.
ಪ್ರಕರಣದ ಆರೋಪಿ ರೋಶನ್ ಕೋಟ್ಯಾನ್ ವೃತ್ತಿಯಲ್ಲಿ ಮೊಬೈಲ್ ಸಿಮ್ ಕಂಪೆನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದನಲ್ಲದೇ ತನ್ನ ಕುಕೃತ್ಯ ರಕ್ಷಣೆಗಾಗಿ ಶ್ರೀರಾಮ ಸೇನೆಯಲ್ಲಿ ಗುರುತಿಸಿಕೊಂಡಿದ್ದನು.












Click it and Unblock the Notifications