ಗುಂಡಿಬಿದ್ದ ರಸ್ತೆಯ ಕಾಯಕಲ್ಪಕ್ಕಾಗಿ ಉರುಳು ಸೇವೆ ಮಾಡಿ ವಿನೂತನ ಪ್ರತಿಭಟನೆ
ಉಡುಪಿ, ಸೆಪ್ಟೆಂಬರ್ 15: ಹೊಂಡಗುಂಡಿಗಳಿಂದ ತುಂಬಿರುವ ರಸ್ತೆಗೆ ಕಾಯಕಲ್ಪ ನೀಡುವಂತೆ ಉಡುಪಿಯ ಸಾಮಾಜಿಕ ಹೋರಾಟಗಾರ ನಿತ್ಯಾನಂದ ಒಳಕಾಡು ವಿನೂತನ ಪ್ರತಿಭಟನೆ ಮಾಡಿ ಗಮನಸೆಳೆದಿದ್ದಾರೆ.
ಉಡುಪಿಯ ಇಂದ್ರಾಳಿ ಬ್ರಿಡ್ಜ್ ಅವ್ಯವಸ್ಥೆಯ ಆಗರವಾಗಿದ್ದು, ಮಳೆಗಾಲ ಆರಂಭವಾದ ಬಳಿಕ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಕಳೆದ ಐದು ವರ್ಷಗಳಿಂದ ರೈಲ್ವೇ ಬ್ರಿಡ್ಜ್ ಕಾಮಗಾರಿ ನಿರಂತರವಾಗಿ ಆಗುತ್ತಿದ್ದು ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.
ಸುರತ್ಕಲ್ ಎನ್ಐಟಿಕೆ ಟೋಲ್ತೆರವು ಆಗಬೇಕು: ಇಲ್ಲದಿದ್ದರೆ ಅ. 18ರಂದು ಧ್ವಂಸದ ಎಚ್ಚರಿಕೆ
ಮೂರು ವರ್ಷಗಳಿಂದ ರಸ್ತೆ ಹಾಳಾಗಿ ಜನ ಕಷ್ಟವನ್ನು ಅನುಭವಿಸುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಉಡುಪಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಖಾವಿ ತೊಟ್ಟು ರಸ್ತೆಗೆ ಆರತಿ ಎತ್ತಿ ಹೊಂಡ ಗುಂಡಿಯ ರಸ್ತೆಯಲ್ಲೇ ನಿತ್ಯಾನಂದ ಉರುಳು ಸೇವೆ ಮಾಡಿದ್ದಾರೆ.
ಇಂದ್ರಾಳಿ ಹಳೆ ಬ್ರಿಡ್ಜ್, ರಾಷ್ಟ್ರೀಯ ಹೆದ್ದಾರಿ 167 ಗೆ ಆರತಿ ಎತ್ತಿ ನಿತ್ಯಾನಂದ ಒಳಕಾಡು ಸುಮಾರು 150 ಮೀಟರ್ ಹೊಂಡ ಗುಂಡಿಯ ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದಾರೆ. ಇಂದ್ರಾಳಿ ರೈಲ್ವೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಕೆಸರು ರಸ್ತೆಯಲ್ಲೆ ಉರುಳು ಸೇವೆ ನಡೆಸಿ ಪ್ರತಿಭಟಿಸುವ ಮೂಲಕ ನಿತ್ಯಾನಂದ ಒಳಕಾಡು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ ಸುಮಾರು 15 ನಿಮಿಷ ಹೊಂಡಗುಂಡಿಗಳಿಂದ ಕೂಡಿದ ಕೆಸರುಮಯವಾಗಿರುವ ಇಂದ್ರಾಳಿ ಸೇತುವೆ ಬಳಿಯ ಹೆದ್ದಾರಿಯಲ್ಲಿ ಮಳೆಯನ್ನು ಲೆಕ್ಕಿಸದೆ ನಿತ್ಯಾನಂದ ಒಳಕಾಡು ಉರುಳುಸೇವೆ ಮಾಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ನಿತ್ಯಾನಂದ ಒಳಕಾಡು, "ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅಪಘಾತಗಳು ಸಂಭವಿಸುತ್ತಿದ್ದು, ಜನ ಸಾಯುತ್ತಿದ್ದಾರೆ. ಯಾರೂ ಚಕಾರ ಎತ್ತುತ್ತಿಲ್ಲ, ಪ್ರತಿನಿತ್ಯ ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ, ಮುಖ್ಯಮಂತ್ರಿಯವರೂ ಈ ರಸ್ತೆಯಲ್ಲಿ ಹಾದು ಹೋಗಿದ್ದಾರೆ. ರಸ್ತೆ ದುರಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಬರಬೇಕಾ? ಎಂದು ಪ್ರಶ್ನಿಸಿದ ಅವರೂ ಜನಪ್ರತಿನಿಧಿಗಳ ಗಮನಸೆಳೆಯಲು ಉರುಳುಸೇವೆ ನಡೆಸಿ ಪ್ರತಿಭಟಿಸಲಾಗಿದೆ" ಎಂದು ತಿಳಿಸಿದರು.
"ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ದಯನೀಯ ಸ್ಥಿತಿಯಲ್ಲಿದೆ. ಮೂರು ವರ್ಷಗಳ ಹಿಂದೆಯೇ ಟೆಂಡರ್ ಮಂಜೂರು ಮಾಡಲಾಗಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ಪ್ರತಿನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದೇ ಕಾರಣಕ್ಕೆ ಹಲವು ಹಸು, ಕರುಗಳು ಸಾವನ್ನಪ್ಪಿವೆ. ಹಸು, ಕರುಗಳ ಹೆಸರಿನಲ್ಲಿ ಮತ ಕೇಳುವವರಿಗೆ ರಸ್ತೆಯ ಶೋಚನೀಯ ಸ್ಥಿತಿ ಕಾಣುವುದಿಲ್ಲವೇ?" ಎಂದು ಅಸಮಧಾನ ವ್ತಕ್ತಪಡಿಸಿದರು.