ಜನವರಿ 21 ರಿಂದ ಕುಂದಾಪುರದಲ್ಲಿ ಸಿರಿಧಾನ್ಯ ಮೇಳ
ಉಡುಪಿ, ಜನವರಿ 20: ಸಿರಿ ಧಾನ್ಯ ಮೇಳ ಹಾಗೂ ಸಿರಿಧಾನ್ಯ ಆಹಾರ ಮೇಳ ಜನವರಿ 21 ರಿಂದ 28 ರವರೆಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಕುಂದೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು, ರಾಜ್ಯದ 18 ಕಡೆ ಸಿರಿಧಾನ್ಯ ಮೇಳ ಯಶಸ್ವಿಯಾಗಿ ನಡೆಸಲಾಗಿದೆ. ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮೇಳವನ್ನು ಆಯೋಜಿಸಲಾಗಿದೆ.
ಸಿರಿಧಾನ್ಯ ಮೇಳದಲ್ಲಿ ಅದಮ್ಯ ಚೇತನದಿಂದ ಶೂನ್ಯ ತ್ಯಾಜ್ಯ ಭೋಜನ ವ್ಯವಸ್ಥೆ
ಮೇಳದಲ್ಲಿ ಏಕದಳ ಧಾನ್ಯಗಳಾದ ನವಣೆ, ಹಾರಕ, ಊದಲು, ಸಾವೆ, ಕೊರಲೆ, ಬರಗು, ರಾಗಿ, ಸಜ್ಜೆ, ಜೋಳ ಮೊದಲಾದ ಸಿರಿಧಾನ್ಯಗಳು ಲಭ್ಯವಾಗಲಿದ್ದು, ಸಿರಿಧಾನ್ಯಗಳಿಂದ ಮಾಡಿದ ಆಹಾರ ಪ್ರದರ್ಶನ, ಪ್ರಾತ್ಯಕ್ಷಿಕೆ ಇದೆ. ಸಿರಿಧಾನ್ಯ ಖಾದ್ಯ ಸವಿಯಲು ಕೂಡ ಲಭ್ಯವಾಗಲಿದೆ.
ಈ ಸಿರಿಧಾನ್ಯಗಳು ನಮ್ಮ ದೇಹಕ್ಕೆ ಮುಖ್ಯವಾಗಿ ಬೇಕಾಗುವ ನಾರು, ಕಬ್ಬಿಣ, ಸುಣ್ಣ, ಪಿಷ್ಠ ಇತ್ಯಾದಿಗಳನ್ನು ನೀಡುತ್ತದೆ. ದೇಹದಲ್ಲಿ ಸಕ್ಕರೆ, ರಕ್ತದಲ್ಲಿ ಕೊಲೆಸ್ಟರಾಲ್ , ಟ್ರೈಗ್ಲಿಸರೈಡ್ ನಿಯಂತ್ರಿಸಲು ಸಹಕಾರಿಯಾಗುತ್ತವೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2017-18ನೇ ಸಾಲಿನಲ್ಲಿ 20 ಸಾವಿರ ರೈತರಿಂದ 80 ಸಾವಿರ ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದು ಮಾರುಕಟ್ಟೆಗೆ ಒದಗಿಸಲಾಗಿದೆ. ಧಾರವಾಡದಲ್ಲಿ ಇದರ ಗಿರಣಿ ಕೂಡ ಸ್ಥಾಪಿಸಲಾಗಿದೆ.