ಧೋ...ಎನ್ನುವ ಮಳೆಯಲ್ಲೇ ವಿಟ್ಲಪಿಂಡಿ ಉತ್ಸವ ಸಂಪನ್ನ: ಮಠದ ಸಿಬ್ಬಂದಿಗೆ ಮಾತ್ರ ಅವಕಾಶ
ಉಡುಪಿ, ಸೆಪ್ಟೆಂಬರ್ 11: ನಿನ್ನೆಯಿಂದಲೂ ಸುರಿಯುತ್ತಿರುವ ಮಳೆ ಇವತ್ತಿನ ಉಡುಪಿಯ ವಿಟ್ಲಪಿಂಡಿ ಉತ್ಸವಕ್ಕೂ ತಣ್ಣೀರೆರಚಿತು. ಆದರೆ ಸಂಪ್ರದಾಯಗಳ ಕಾಶಿ ಎನಿಸಿರುವ ಕೃಷ್ಣಮಠದಲ್ಲಿ ಮಳೆಯ ನಡುವೆಯೇ ವಿಟ್ಲಪಿಂಡಿ ಉತ್ಸವ ಸಾಂಗವಾಗಿ ನೆರವೇರಿದೆ.
ಮೂರು ಗಂಟೆಗೆ ಆರಂಭವಾಗಬೇಕಿದ್ದ ವಿಟ್ಲಪಿಂಡಿ ಉತ್ಸವಕ್ಕೆ ಮಳೆರಾಯನ ಸ್ವಾಗತ ಸಿಕ್ಕಿತು. ಈ ಬಾರಿ ಭಕ್ತಾದಿಗಳಿಗೆ ಅವಕಾಶ ಇರಲಿಲ್ಲ, ಬದಲಾಗಿ ಮಠಾಧೀಶರು ಮತ್ತು ಮಠದ ಸಿಬ್ಬಂದಿಗೆ ಮಾತ್ರ ಅವಕಾಶ ಇತ್ತು. ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ವಿಟ್ಲಪಿಂಡಿ ಆಚರಿಸಿದ ಮಠಾಧೀಶರು, ಸುರಿಯುವ ಮಳೆಯನ್ನೂ ಲೆಕ್ಕಿಸದೆ ಉತ್ಸವದಲ್ಲಿ ಪಾಲ್ಗೊಂಡರು.

ಮಧ್ಯಾಹ್ನ ಮೂರು ಗಂಟೆಗೆ ಶ್ರೀಕೃಷ್ಣನ ಉತ್ಸವ ಆರಂಭವಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಶುರುವಾಯಿತು. ಮಳೆ ನಡುವೆಯೇ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃತ್ತಿಕಾ ಮೂರ್ತಿಯ ಉತ್ಸವ ನಡೆಸಲಾಯಿತು. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಕೃಷ್ಣ ಮಠದ ಮತ್ತು ಅಷ್ಟಮಠಗಳ ಸಿಬ್ಬಂದಿಗಳು, ಗೊಲ್ಲ ಸಮುದಾಯದವರು ಕೃಷ್ಣನ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಕೊಡಲಾಗಿತ್ತು.

ರಥಬೀದಿಯ ಎಲ್ಲ ಗೇಟುಗಳಲ್ಲೂ ಪೊಲೀಸರ ನಿಯೋಜನೆ ಮಾಡಿ, ಸಾರ್ವಜನಿಕರಿಗೆ ರಥಬೀದಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು. ಕೃಷ್ಣಮಠದ ಮುಂಭಾಗ ಇರಿಸಲಾಗಿದ್ದ ಮೊಸರು ಗಡಿಗೆಗಳನ್ನು ಗೊಲ್ಲವೇಷಧಾರಿಗಳು ಒಡೆಯುವ ಮೂಲಕ ಉತ್ಸವ ಆರಂಭಗೊಂಡಿತು.

ಅಷ್ಟ ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡು, ಮಂಗಳ ವಾದ್ಯಗಳ ಮೂಲಕ ಕೃಷನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಗೆ ಪ್ರದಕ್ಷಿಣೆ ನಡೆಸಲಾಯಿತು. ಈ ವೇಳೆ ಮಠಾಧೀಶರು ನೆರೆದ ಸೀಮಿತ ಭಕ್ತರಿಗೆ ಉಂಡೆ, ಚಕ್ಕುಲಿ ಪ್ರಸಾದ ನೀಡಿದರು.












Click it and Unblock the Notifications