ಸಿದ್ರಾಮಯ್ಯದು ತಿರುಕನ ಕನಸು: ನೂರಾ ಒಂದನೇ ಬಾರಿಗೆ ಹೀಗಳೆದ ಬಿಎಸ್ ವೈ
ಉಡುಪಿ, ಫೆಬ್ರವರಿ 21 : ಮತ್ತೊಮ್ಮೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರದು ತಿರುಕನ ಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಇಲ್ಲಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಜಾಲತಾಣಿಗರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ನೀವು ಸೊಕ್ಕಿನಿಂದ, ಧಿಮಾಕಿನಿಂದ ಮಾತನಾಡಬೇಡಿ. ನಿಮಗಿರುವುದು ಇನ್ನೆರಡೇ ತಿಂಗಳು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಹುಲ್ ಚೊಕ್ಸಿ ಪರಾರಿಗೆ ನೆರವಾಗಿದ್ದ ಸಿದ್ದರಾಮಯ್ಯ: ಬಿಎಸ್ವೈ ಆರೋಪ
ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ದಿಲ್ಲಿಯಲ್ಲಿ ಒಂದೂ ದೇವಸ್ಥಾನಕ್ಕೆ ಹೋಗದ ರಾಹುಲ್ ಗಾಂಧಿಗೆ ಈಗ ದೇಗುಲಗಳ ನೆನಪಾಗಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್, ವಿದ್ವತ್ ಮೇಲೆ ನಡೆಸಿದ ಹಲ್ಲೆ ಘಟನೆಯ ಬಗ್ಗೆ ಮಾತನಾಡಿ, ರಾಜ್ಯ ಸರಕಾರ ಗೂಂಡಾಗಿರಿಯನ್ನು ಪೋಷಿಸುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ನಾರಾಯಣ ಸ್ವಾಮಿ ಸರಕಾರಿ ಕಚೇರಿಯಲ್ಲಿ ಪೆಟ್ರೋಲ್ ಎರಚಿದರೂ ಯಾಕೆ ಬಂಧಿಸಿಲ್ಲ? ವಿದ್ವತ್ ಮೇಲೆ ಹಲ್ಲೆ ನಡೆಸಿದವರಿಗೆ ಸರಕಾರ ಸಹಕಾರ ಕೊಡುತ್ತಿದೆ. ದರ್ಪ ತೋರಿಸುವವರು, ಲೂಟಿಕೋರರನ್ನು ಸಿಎಂ ಜೊತೆಗೆ ಇಟ್ಟುಕೊಂಡಿದ್ದಾರೆ. ಪಕ್ಕದಲ್ಲೇ ಇರುವ ಗೂಂಡಾಗಳ ಬಗ್ಗೆ ಸಿದ್ದರಾಮಯ್ಯರಿಗೆ ಏನು ಅನಿಸುತ್ತಿಲ್ಲವಾ? ಎಂದು ಪ್ರಶ್ನಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವೆಬ್ ಸೈಟ್ ಅನಾವರಣ ಮಾಡಿದರು.