ಸವಿತಾ ಸಮಾಜದ ಧರ್ಮಾಧಿಕಾರಿಯಾಗಿ ಶ್ರೀಧರಾನಂಧ ನೇಮಕ
ಉಡುಪಿ, ಡಿಸೆಂಬರ್.23 : ಸವಿತಾ ಸಮಾಜದ ಧರ್ಮಪೀಠಕ್ಕೆ ಧರ್ಮಾಧಿಕಾರಿಯಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕೊಂಚೂರು ಗ್ರಾಮದ ಶ್ರೀಧರಾನಂದರನ್ನು ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ನಿಯುಕ್ತಿಗೊಳಿಸಿದರು.
ಗುರುವಾರ ರಾಜಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಹಿಂದಿನಿಂದಲೂ ತಮಗೆ ಸವಿತಾ ಸಮಾಜದೊಂದಿಗೆ ಇದ್ದ ಸಂಬಂಧವನ್ನು ಮುಂದುವರಿಸಲಿದ್ದೇವೆ.
ನೂತನ ಧರ್ಮಾಧಿಕಾರಿಯಿಂದ ಸವಿತಾ ಸಮಾಜ ಮತ್ತು ಹಿಂದೂ ಸಮಾಜಕ್ಕೆ ಮಾರ್ಗದರ್ಶನ ದೊರಕುವಂತಾಗಲಿ ಎಂದು ಹಾರೈಸಿದರು. ವೈದಿಕರು ಬೆಳಗ್ಗೆ ಸುದರ್ಶನ ಮೊದಲಾದ ಹೋಮಗಳನ್ನು ನಡೆಸಿದರು.

ಬಳಿಕ ಕಲಶಾಭಿಷೇಕದ ಮೂಲಕ ಪಟ್ಟಾಭಿಷೇಕ, ತಪ್ತ ಮುದ್ರಾಧಾರಣೆ, ಕೃಷ್ಣ ಮಂತ್ರ ದೀಕ್ಷೆ, ಮಂತ್ರೋಪದೇಶ ಗಳನ್ನು ನೀಡಿ ಪೇಜಾವರ ಶ್ರೀಪಾದರು ವಟು ಶ್ರೀಧರಾನಂದರನ್ನು ಆಶೀರ್ವದಿಸಿದರು. ಮಠದ ಪುರೋಹಿತರಾದ ವಿಠಲ ಆಚಾರ್ಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ರಾಜ್ಯದ ವಿವಿಧಡೆಗಳಿಂದ ಉಡುಪಿಗೆ ಆಗಮಿಸಿದ ಸವಿತಾ ಸಮಾಜದ ಮುಖಂಡರ ಸಮ್ಮುಖದಲ್ಲಿ ಪೇಜಾವರ ಶ್ರೀಗಳು ಶ್ರೀಧರಾನಂದರಿಗೆ ಭಕ್ತಿ ದೀಕ್ಷೆ, ಮಂತ್ರೋಪದೇಶ ನೀಡಿ ಹರಸಿದರು.
ಸವಿತ ಸಮಾಜದ ನೂತನ ಧರ್ಮಾಧಿಕಾರಿ ಬಗ್ಗೆ: ಶ್ರೀಧರಾನಂಧರ ಮೂಲ ಹೆಸರು ಶ್ರೀಧರ. ಬಾಗಲಕೋಟೆಯ ಶ್ರೀಶ್ರದ್ಧಾನಂದ ಸ್ವಾಮೀಜಿ ಅವರ ಸಂಪರ್ಕಕ್ಕೆ ಬಂದಾಗ ಶ್ರೀಧರರಿಗೆ ಶ್ರೀಧರಾನಂದ ಸ್ವಾಮೀಜಿ ಎಂದು ಕರೆದರು.
ಶ್ರೀಧರಾನಂದರು ತುಮಕೂರು ಸಿದ್ಧಗಂಗಾ ಮಠ ಮತ್ತು ಆದಿಚುಂಚನಗಿರಿ ಮಠದಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದು ಕೊಂಚೂರು ಗ್ರಾಮದಲ್ಲಿ ಮೂರು ವರ್ಷಗಳಿಂದ ಮಠ ಹಾಗೂ ಗೋಶಾಲೆ ನಡೆಸುತ್ತಿದ್ದಾರೆ.
ಶ್ರೀಧರ ಅವರ ತಂದೆ ಎಚ್.ಆಂಜನೇಯ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ವಾಡಿ ಶಾಖೆಯಲ್ಲಿ ಸಹಾಯಕ ಪ್ರಬಂಧಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ತಾಯಿ ಪದ್ಮಾವತಿ, ಇಂಜಿನಿಯರಿಂಗ್ ಓದುತ್ತಿರುವ ತಮ್ಮ ಸಚ್ಚಿದಾನಂದ.
ತಂಗಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತಿದ್ದಾರೆ. ಆಂಜನೇಯರು ತಮ್ಮ ನಾಲ್ಕು ಎಕ್ರೆ ಜಾಗವನ್ನು ಸವಿತಾ ಸಮಾಜದ ಪೀಠಕ್ಕೆ ಕೊಟ್ಟಿದ್ದು, ಅಲ್ಲಿ ಮಠ ಮತ್ತು 34 ದೇಸೀ ತಳಿಯ ಗೋವುಗಳಿರುವ ಗೋಶಾಲೆಯನ್ನು ಶ್ರೀಧರಾನಂದರು ನಡೆಸುತ್ತಿದ್ದಾರೆ.
ರಾಜ್ಯದ ನಾನಾ ಜಿಲ್ಲೆಯ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳು ಹಾಗೂ ಸಮಾಜದ ಮುಖಂಡರು ಸೇರಿದಂತೆ ಮೊದಲಾದವರು ಈ ಧರ್ಮಾಧಿಕಾರಿ ನೇಮಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications