ಏರ್ ಶೋ ಅಗ್ನಿ ಅವಘಡಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ:ಶೋಭಾ ಕರಂದ್ಲಾಜೆ
ಉಡುಪಿ, ಫೆಬ್ರವರಿ 24:ಬೆಂಗಳೂರು ಏರ್ ಶೋ ಸ್ಥಳದಲ್ಲಿ ನಡೆದ ಬೆಂಕಿ ಅವಘಡ ಕುರಿತು ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏರ್ ಶೋ ಕೇಂದ್ರ ಸರ್ಕಾರ- ವಿವಿಧ ಇಲಾಖೆಯ ಆಯೋಜನೆಯಾಗಿದ್ದು, ಕಾರ್ಯಕ್ರಮಕ್ಕೆ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಏರ್ ಶೋಗೆ ದೇಶ ವಿದೇಶದಿಂದ ಜನ ಬಂದಿದ್ದು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಅವಘಡಕ್ಕೆ ಕಾರಣ ಎಂದು ಶೋಭಾ ಆರೋಪಿಸಿದ್ದಾರೆ.
ಏರ್ ಶೋ ಶಿಫ್ಟಾಗುವಾಗ ನಾವು ದನಿ ಎತ್ತಿದ್ದೆವು. ಇಂತಹ ಘಟನೆ ಶೋಭೆ ತರುವುದಿಲ್ಲ.ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತದೆ.ರಕ್ಷಣೆ ಕೊಡಲು ಆಗಲ್ಲಾ ಅಂದ್ರೆ ಏನರ್ಥ?.ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು?, ಕಾಶ್ಮೀರದ ಫುಲ್ವಾಮಾ ಘಟನೆಗೂ ಇದಕ್ಕೂ ಲಿಂಕ್ ಇದ್ಯಾ? ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ?
ಹೀಗೆ ಎಲ್ಲಾ ಆಯಾಮದಲ್ಲಿ ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದರು.

ರೈತರ ಖಾತೆಗೆ 2 ಸಾವಿರ ರೂಪಾಯಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವುದರ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಆರಂಭಿಕ ಈ ಮೊತ್ತ ಭವಿಷ್ಯದಲ್ಲಿ ಹೆಚ್ಚಾಗಲಿದೆ. ರೈತರ ಮೇಲಿನ ಹೊರೆ ಕಡಿಮೆ ಆಗಲಿದೆ. ನೇರವಾಗಿ ರೈತರಿಗೆ ಈ ಹಣ ತಲುಪುತ್ತದೆ. ಪ್ರಧಾನಿ ಮೋದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.












Click it and Unblock the Notifications