ಶೀರೂರು ಶ್ರೀಗಳು ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣವೇನು ಗೊತ್ತಾ?
ಉಡುಪಿ, ಏಪ್ರಿಲ್ 27 : ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿ ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶೀರೂರು ಶ್ರೀಗಳು ಇಂದು ಶುಕ್ರವಾರ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಇದೇ ಮಂಗಳವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶ್ರೀಗಳು ನಾಮಪತ್ರ ಹಿಂತೆಗೆತಕ್ಕೆ ಕಾರಣವನ್ನೂ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ, ಮೇ ಒಂದಕ್ಕೆ ಪ್ರಧಾನಿಯವರು ಉಡುಪಿಗೆ ಬರುತ್ತಿದ್ದಾರೆ. ಹೀಗಾಗಿ ತಮ್ಮ ಊರಿಗೆ ಬರುವಾಗ ಅವರ ಧ್ಯೇಯ ಮತ್ತು ಚಿಂತನೆಗಳಿಗೆ ತೊಡಕುಂಟು ಮಾಡಬಾರದು ಎಂಬ ಉದ್ದೇಶದಿಂದ ನಾಮಪತ್ರ ಹಿಂತೆಗೆದುಕೊಂಡಿದ್ದೇನೆ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ ಶೀರೂರು ಶ್ರೀ, ಕಾಪುವಿನಲ್ಲಿ ಅನುಪಮಾ
ಹಾಗೆ ನೋಡಿದರೆ ಶ್ರೀಗಳ ಈ ನಿರ್ಧಾರ ಸಂಚಲನ ಮೂಡಿಸಿದ್ದು ಬಿಟ್ಟರೆ ಸ್ವತಃ ಶ್ರೀಗಳಲ್ಲೇ ಸ್ಪಷ್ಟತೆ ಇರಲಿಲ್ಲ. ಬಿಜೆಪಿ ಸರಿಯಿಲ್ಲ ಎನ್ನುತ್ತಲೇ ಶ್ರೀಗಳು ಬಿಜೆಪಿ ಟಿಕೆಟ್ ಬಯಸಿದ್ದರು. ಮಾತ್ರವಲ್ಲ, ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಹೊಗಳಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶೀರೂರು ಸ್ವಾಮಿ, ಪ್ರಚಾರವನ್ನೂ ಮಾಡಿರಲಿಲ್ಲ. ಆದರೆ ಬಿಜೆಪಿಯಲ್ಲಿ ಸ್ವಾಮೀಜಿಯ ಉಮೇದುವಾರಿಕೆ ತುಸು ಆತಂಕ ಸೃಷ್ಟಿ ಮಾಡಿದ್ದು ನಿಜ. ಈಗ ಕಣದಿಂದ ಹಿಂದೆ ಸರಿಯುವ ಮೂಲಕ ಶ್ರೀಗಳು ಬಿಜೆಪಿ ಪಕ್ಷಕ್ಕೆ ತುಸು ನೆಮ್ಮದಿ ನೀಡಿದ್ದಾರೆ. ಉಡುಪಿಯಲ್ಲಿ ಬಿಜೆಪಿಯಿಂದ ರಘುಪತಿ ಭಟ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.