ಉಡುಪಿ ಮಠದ ಉತ್ತರಾಧಿಕಾರಿ ವಿವಾದ: ಅಪ್ರಾಪ್ತರಿಗೆ ಸನ್ಯಾಸ ದೀಕ್ಷೆಯ ಇತಿಹಾಸ - ಸರಣಿ 2
ಶಿರೂರು ಮಠದ ನೂತನ ಉತ್ತರಾಧಿಕಾರಿಯಾಗಿ ವೇದವರ್ಥನ ತೀರ್ಥರನ್ನು ಸೋದೆ ಮಠದ ಯತಿಗಳು ನೇಮಿಸಿದ್ದಾರೆ. ನೂತನ ಪೀಠಾಧಿಪತಿಯನ್ನು ನೇಮಿಸುವ ಪ್ರಕ್ರಿಯೆ ಆರಂಭ ಆದಾಗಿನಿಂದಲೂ ಇದಕ್ಕೆ ಶಿರೂರು ಮಠದ ಭಕ್ತ ಸಮಿತಿ ವಿರೋಧವನ್ನು ವ್ಯಕ್ತ ಪಡಿಸುತ್ತಲೇ ಇತ್ತು.
ಈಗ ಪೀಠಾರೋಹಣಗೈದಿರುವ ವೇದವರ್ಥನ ತೀರ್ಥರಿಗೆ ವಯಸ್ಸು ಇನ್ನೂ ಹದಿನಾರು. ಅಪ್ರಾಪ್ತ ವಯಸ್ಕರನ್ನು ಶಿರೂರು ಮಠಕ್ಕೆ ಶ್ರೀಗಳನ್ನಾಗಿ ನೇಮಿಸಿರುವುದು ಕಾನೂನು ಬಾಹಿರ ಮತ್ತು ಮಠದ ಸಂಪ್ರದಾಯಕ್ಕೆ ವಿರುದ್ದವಾದದ್ದು ಎನ್ನುವುದು ಭಕ್ತ ಸಮಿತಿಯ ಕೋಪಕ್ಕೆ ಕಾರಣವಾಗಿದೆ.
ಉಡುಪಿ ಮಠದ ಉತ್ತರಾಧಿಕಾರಿ ವಿವಾದ: ಮಾಧ್ವಪೀಠದ ಇತಿಹಾಸ ಏನು ಹೇಳುತ್ತೆ- ಸರಣಿ 1
ಹದಿನಾರು ವರ್ಷದ ವಟುವಿಗೆ ಸನ್ಯಾಸ ದೀಕ್ಷೆ ನೀಡಿದ ವಿಚಾರ ಈಗ ಹೈಕೋರ್ಟ್ ಮೆಟ್ಟಲೇರಿದೆ. ಅಪ್ರಾಪ್ತ ವಟುವಿಗೆ ಸನ್ಯಾಸ ದೀಕ್ಷೆ ನೀಡಿರುವುದಕ್ಕೆ ಹೈಕೋರ್ಟ್ ಕೂಡಾ ಅಸಮಾಧಾನ ವ್ಯಕ್ತ ಪಡಿಸಿ, ಜೂನ್ ಎರಡಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಆದರೆ, ಕೃಷ್ಣಮಠದ ಎಂಟು ನೂರು ವರ್ಷಗಳ ಇತಿಹಾಸದಲ್ಲಿ ಅಪ್ರಾಪ್ತರಿಗೆ ಸನ್ಯಾಸ ದೀಕ್ಷೆ ನೀಡಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಆದರೆ, ಈ ಹಿಂದೆ ಪೇಜಾವರ ಹಿರಿಯ ಶ್ರೀಗಳು ಹಾಕಿಕೊಟ್ಟ ಸಂಪ್ರದಾಯವನ್ನು ಸೋದೆ ಶ್ರೀಗಳು ಉಲ್ಲಂಘಿಸಿದ್ದಾರೆ ಎನ್ನುವುದು ಭಕ್ತ ಸಮಿತಿಯ ಆರೋಪ ಕೂಡಾ ಆಗಿದೆ.
ಉಡುಪಿ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ: ಹೈಕೋರ್ಟ್ ಅಸಮಾಧಾನ
ವಿಷ್ಣುಪಾದ ಸೇರಿರುವ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು
ವಿಷ್ಣುಪಾದ ಸೇರಿರುವ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಅಷ್ಟಮಠಗಳಿಗೆ ಅಲಿಖಿತ ಸಂವಿಧಾನವನ್ನು ರಚಿಸಿದ್ದರು. ಅದರಂತೇ, ಇಪ್ಪತ್ತು ವರ್ಷ ಸಂಪೂರ್ಣಗೊಂಡ ನಂತರ ಮತ್ತು ಹತ್ತು ವರ್ಷಗಳ ವೇದಾಧ್ಯಯನ ಮಾಡಿದ ನಂತರವಷ್ಟೇ ಸನ್ಯಾಸ ದೀಕ್ಷೆ ನೀಡಬೇಕು ಎನ್ನುವುದು ಪೇಜಾವರ ಶ್ರೀಗಳು ಅದರಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಲಾಗುತ್ತಿದೆ.
ವಟುಗಳಿಗೆ ಸನ್ಯಾಸ ದೀಕ್ಷೆ ನೀಡಿದ ಸಾಕಷ್ಟು ಉದಾಹರಣೆಗಳಿವೆ
ಮಾಧ್ವಪೀಠದ ಇತಿಹಾಸವನ್ನು ನೋಡಿದರೆ ಅಪ್ರಾಪ್ತ ವಯಸ್ಸಿನ ವಟುಗಳಿಗೆ ಸನ್ಯಾಸ ದೀಕ್ಷೆ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಖುದ್ದು, ಹಿರಿಯ ಪೇಜಾವರ ಶ್ರೀಗಳಿಗೇ ಎಂಟನೇ ವರ್ಷಕ್ಕೆ ಸನ್ಯಾಸ ದೀಕ್ಷೆ ನೀಡಲಾಗಿತ್ತು. ಕಾಣಿಯೂರು ಮಠದ ವಿದ್ಯಾವಾರಿನಿಧಿ ತೀರ್ಥರು ಹನ್ನೊಂದನೇ ವಯಸ್ಸಿಗೆ, ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಹದಿನೈದನೇ ವಯಸ್ಸಿಗೆ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಮತ್ತು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಹದಿಮೂರನೇ ವಯಸ್ಸಿಗೆ, ಸೋದೆ ಮಠದ ವಿಶ್ವವಲ್ಲಭ ತೀರ್ಥರು ಹದಿನೈದನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದಿದ್ದರು.
ಹೈಕೋರ್ಟ್ ಮೆಟ್ಟಲೇರಿರುವ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ
ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡಿದ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಲೇರಿರುವ ಕೃಷ್ಣೈಕ್ಯರಾದ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮತ್ತು ವಾದಿರಾಜ ಆಚಾರ್ಯರ ಪ್ರಕಾರ, ಶಿರೂರು ಮಠದ ನೂತನ ಯತಿ ವೇದವರ್ಥನ ತೀರ್ಥರು ಅಪ್ರಾಪ್ತ ವಯಸ್ಕರು, ವೇದಾಧ್ಯಯನ ಅವರಿಗೆ ಆಗಿಲ್ಲ, ಬಲವಂತದಿಂದ ಸನ್ಯಾಸತ್ವ ದೀಕ್ಷೆ ನೀಡಲಾಗಿದೆ ಮತ್ತು ಶಿರೂರು ಮಠದ ಆಸ್ತಿಪಾಸ್ತಿ, ವ್ಯವಹಾರಗಳನ್ನು ಸೋದೆ ಮಠ ಪಾರದರ್ಶಕವಾಗಿ ಇಟ್ಟಿಲ್ಲ ಎನ್ನುವುದು.
Recommended Video
ಆರೋಪ ಸೋದೆ ಮಠದ ವ್ಯಾಪ್ತಿಗೆ ಬರುವ ಮುನ್ನವೇ ಕೇಳಿಬರುತ್ತಿತ್ತು
ಆದರೆ, ಸೋದೆ ಮಠದ ಶ್ರೀಗಳು ಹೇಳುವ ಪ್ರಕಾರ ಶಿರೂರು ಮಠದ ಹೆಸರಿನಲ್ಲಿದ್ದ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆಯಾಗಿದೆ, ಠೇವಣಿ ಹಣವನ್ನು ಕಾರ್ಪೋರೇಶನ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ. ಮಣಿಪಾಲದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ನಿಂದ ಮಾತ್ರ ಬಾಡಿಗೆ ಬರುತ್ತಿದೆ. ಇದು ಬಿಟ್ಟರೆ ಶಿರೂರು ಮಠಕ್ಕೆ ಆದಾಯ ಏನೂ ಇಲ್ಲ ಎನ್ನುವುದು. ಶಿರೂರು ಮಠದ ಹಣ, ಆಸ್ತಿಯಲ್ಲಿ ಗೋಲ್ಮಾಲ್ ನಡೆದಿದೆ ಎನ್ನುವ ಆರೋಪ ಶಿರೂರು ಮಠ, ಸೋದೆ ಮಠದ ವ್ಯಾಪ್ತಿಗೆ ಬರುವ ಮುನ್ನವೇ ಕೇಳಿಬರುತ್ತಿತ್ತು. ಅದೇನು ಎನ್ನುವುದನ್ನು ಮುಂದಿನ ಸರಣಿಯಲ್ಲಿ ಮುಂದುವರಿಸಲಾಗುವುದು.