ಲಾಕ್ಡೌನ್ ಮುಂದುವರೆಸಿದರೆ ತೀವ್ರ ಆರ್ಥಿಕ ಸಂಕಷ್ಟ: ಶಾಸಕ ರಘುಪತಿ ಭಟ್
ಉಡುಪಿ, ಜೂನ್ 9: ಕೋವಿಡ್ ಸೋಂಕಿನ ಪರಿಸ್ಥಿತಿ ಸುಧಾರಿಸುತ್ತಾ ಬಂದಿದ್ದು, ಮುಂದೆ ಸಂಪೂರ್ಣ ಲಾಕ್ಡೌನ್ ಮಾಡುವುದು ಬೇಡ, ಮತ್ತು ಲಾಕ್ಡೌನ್ ಮುಂದುವರೆಸಿದರೆ ಜನರು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೀಡಾಗುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಕೆಲವು ನಿಬಂಧನೆಗಳೊಂದಿಗೆ ಜನ ಜೀವನ ಪ್ರಾರಂಭಿಸಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಧಾರ್ಮಿಕ ಮತ್ತು ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳು ಬೇಡ. ಕನಿಷ್ಠ ಮೂರು ತಿಂಗಳು ಈ ಚಟುವಟಿಕೆಗಳು ಬಂದ್ ಆಗಬೇಕು ಎಂದರು.
ಸುಗಮ ಜನ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು. ಗೂಡಂಗಡಿ, ಹೋಟೆಲ್, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು. ಜೂನ್ 14 ನಂತರವೂ ಲಾಕ್ಡೌನ್ ಮುಂದುವರೆದರೆ ಆರ್ಥಿಕ ಸಂಕಷ್ಟವಾಗುತ್ತದೆ. ಆರ್ಥಿಕ ಪ್ಯಾಕೇಜು ಕೊಟ್ಟು ಪೂರೈಸುವುದಿಲ್ಲ. ಜೂ.14 ನಂತರ ಲಾಕ್ಡೌನ್ ವಾಪಸ್ ಪಡೆಯುವಂತೆ ಸಿಎಂ ಯಡಿಯೂರಪ್ಪಗೆ ಮನವಿ ಮಾಡಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದರು.

ಪಾಸಿಟಿವಿಟಿ ರೇಟ್ ಶೇ. 10- 15 ಕಡಿಮೆಯಾದ ಜಿಲ್ಲೆಗೆ ಲಾಕ್ಡೌನ್ ಬೇಡ ಎಂದ ಅವರು, ರಾಜ್ಯದಲ್ಲಿ ಪಾಸಿಟಿವ್ ಕೇಸ್ 50 ಸಾವಿರದಿಂದ 12 ಸಾವಿರಕ್ಕೆ ಇಳಿದಿದೆ. ಅನ್ಲಾಕ್ ಮಾಡದಿದ್ದರೆ ಕೋವಿಡ್ಗಿಂತ ಗಂಭೀರ ಪರಿಸ್ಥಿತಿ ಉಂಟಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟರು.
ನಾವೇ ಸಹಿ ಸಂಗ್ರಹಿಸುವುದು ಒಳ್ಳೆಯ ಸಂಪ್ರದಾಯವಲ್ಲ
ಸಿಎಂ ಯಡಿಯೂರಪ್ಪರಿಗೆ ವಯಸ್ಸಾದರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯವಾಗಿ ಇದ್ದವರಿಗೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ರಘುಪತಿ ಭಟ್ ಹೇಳಿದರು.
ಸಿಎಂ ರಾಜ್ಯದ ಜನರ ಸಮಸ್ಯೆ ಆಲಿಸುತ್ತಾರೆ, ಜಿಲ್ಲಾಧಿಕಾರಿಗಳು ಶಾಸಕರ ಸಭೆ ನಡೆಸುತ್ತಾರೆ. ಯಡಿಯೂರಪ್ಪ ಪರ- ವಿರೋಧ ಸಹಿ ಸಂಗ್ರಹ ಮಾಡಬಾರದು ಎಂಬ ಸೂಚನೆ ಬಂದಿದೆ. ನನ್ನ ಬಳಿ ಯಾರೂ ಸಹಿ ಕೇಳಿಲ್ಲ, ನಾನು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಸಹಿ ಸಂಗ್ರಹ ಆಗಬಾರದು ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ, ಆದರೆ ಶಾಸಕರ ಅಭಿಪ್ರಾಯಗಳನ್ನು ಬೇಕಿದ್ದರೆ ಕೇಳಬಹುದು. ಶಾಸಕರನ್ನು ಕರೆದು ಅಭಿಪ್ರಾಯ ಕೇಳಲು ಅವಕಾಶ ಇದೆ. ಇಲ್ಲೇ ಯಾರೋ ಕೂತುಕೊಂಡು ಸಹಿ ಸಂಗ್ರಹ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
Recommended Video
ಸಿಎಂ ಬದಲಾವಣೆ ವಿಚಾರ ಎಲ್ಲಿಂದ ಸೃಷ್ಟಿಯಾಗಿದೆಯೋ ಗೊತ್ತಿಲ್ಲ, ಸಿಎಂ ಬದಲಾವಣೆ ಆಗಬೇಕಾದ ಅನಿವಾರ್ಯತೆ ನನಗೆ ಕಂಡುಬರುತ್ತಿಲ್ಲ. ಹೈಕಮಾಂಡ್ನ ವರಿಷ್ಠರು ಬಂದು ಶಾಸಕರ ಅಭಿಪ್ರಾಯ ಕೇಳಬಹುದು. ರಾಜನಾಥ್ ಸಿಂಗ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅವರೇ ಬಂದು ಅಭಿಪ್ರಾಯ ಕೇಳಿದ್ದರು. ಪ್ರತಿಯೊಬ್ಬರ ಶಾಸಕರ ಒನ್ ಟು ಒನ್ ಅಭಿಪ್ರಾಯ ಕೇಳಿದ್ದರು ಎಂದು ನೆನಪಿಸಿಕೊಂಡರು.












Click it and Unblock the Notifications