ಉಡುಪಿ ಸ್ವರ್ಣ ಗೋಪುರಕ್ಕೆ 5ಲಕ್ಷ ರೂ. ಘೋಷಿಸಿದ ಟಿ.ಎ.ಶರವಣ
ಉಡುಪಿ, ನವೆಂಬರ್ 29 : ಉಡುಪಿ ಶ್ರೀಕೃಷ್ಣ ಮಠದ 120 ಕೆಜಿ ತೂಕದ ಸುವರ್ಣ ಗೋಪುರ ಪ್ರಾರಂಭೋತ್ಸವ ಕಾರ್ಯಕ್ರಮ ಆರಂಭವಾಗಿದೆ. ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ.ಶರವಣ ಅವರು ಇದಕ್ಕೆ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದರು.
ಬುಧವಾರ ಉಡುಪಿಯ ರಾಜಾಂಗಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಸುವರ್ಣ ಗೋಪುರ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಚಾಲನೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, 5 ಲಕ್ಷ ರೂಪಾಯಿಗಳನ್ನು ತಮ್ಮ ಸ್ವಂತ ಖರ್ಚಿನಿಂದ ಈ ಪುಣ್ಯದ ಕಾರ್ಯಕ್ರಮಕ್ಕೆ ನೀಡುವುದಾಗಿ ಘೋಷಣೆ ಮಾಡಿದರು. ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ವತಿಯಿಂದ ಹಿಂದೂ ದೇವಾಲಯದ ಸುವರ್ಣ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.
ಉಡುಪಿ ಶ್ರೀ ಕೃಷ್ಣ ಮಠದ ಗರ್ಭಗುಡಿಗೆ ಗೋಪುರಕ್ಕೆ 100 ಕೆಜಿ ಬಂಗಾರದ ತಗಡನ್ನು ಹೊದಿಸುವ ಕಾರ್ಯಕ್ಕೆ ಬುಧವಾರ ಚಾಲನೆ ಸಿಕ್ಕಿದ್ದು, 100 ದಿನದಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ...

ಗರ್ಭಗುಡಿಯ ಚಿನ್ನದ ಗೋಪುರ
ಉಡುಪಿ ಶ್ರೀ ಕೃಷ್ಣ ಮಠದ ಗರ್ಭಗುಡಿಗೆ ಗೋಪುರಕ್ಕೆ 100 ಕೆಜಿ ಬಂಗಾರದ ತಗಡನ್ನು ಹೊದಿಸುವ ಕಾರ್ಯಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಈ ಕಾರ್ಯಕ್ಕೆ 5 ಲಕ್ಷ ರೂಪಾಯಿಗಳನ್ನು ತಮ್ಮ ಸ್ವಂತ ಖರ್ಚಿನಿಂದ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನಾಗರಾಜ್ ಶರ್ಮಾ ಅವರಿಂದ ಕಾರ್ಯ
ಬುಧವಾರ ನಡೆದ ಸಮಾರಂಭದಲ್ಲಿ ಸ್ವರ್ಣ ಗೋಪುರದ ಉಸ್ತುವಾರಿ ಕಾರ್ಯವನ್ನು ಯು.ವೆಂಕಟೇಶ್ ಸೇಠ್, ಮರದ ಕೆತ್ತನೆ ಕೆಲಸವನ್ನು ಗಣೇಶ್ ಹಿರಿಯಡ್ಕ, ಚಿನ್ನದ ಕೆಲಸವನ್ನು ಅಶೋಕ್, ಗಣಪತಿ ಆಚಾರ್ಯ, ಸುರೇಶ್ ಸೇಠ್ ಅವರಿಗೆ ವಹಿಸಲಾಯಿತು. ತಗಡಿನ ಕೆಲವನ್ನು ನಾಗರಾಜ್ ಶರ್ಮಾ ಅವರಿಗೆ ನೀಡಲಾಗಿದೆ.

ಚಿನ್ನದ ಹೊದಿಕೆ ಕಾರ್ಯ
ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ನಾಣ್ಯ, ಗಟ್ಟಿ ಕರಗಿಸಿ ಸಾಂಕೇತಿಕವಾಗಿ ತಗಡಿಗೆ ಆಕಾರ ನೀಡಲಾಯಿತು. ಸಮಾರಂಭದಲ್ಲಿ ಮಾತನಾಡಿದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, 'ಗೋಪುರಕ್ಕೆ ಮಾಡುವ ಚಿನ್ನದ ಹೊದಿಕೆ ಶ್ರೀ ಕೃಷ್ಣನ ವಿಗ್ರಹಕ್ಕೆ ಮಾಡಿದಂತಾಗುತ್ತದೆಯೇ ವಿನಃ ಮಣ್ಣಿಗೆ ಮಾಡುವ ಹೊದಿಕೆಯಲ್ಲ. ಭಕ್ತರ ಸಹಕಾರದಿಂದ ಈ ಕಾರ್ಯ ಕೈಗೊಂಡಿದ್ದೇನೆ' ಎಂದರು.

ಪಾರದರ್ಶಕವಾಗಿ ಕೆಲಸ
ಗೋಪುರದ ಚಿನ್ನದ ಹೊದಿಕೆ ಕಾರ್ಯ ರಥಬೀದಿ ಸಮೀಪವೇ ಪಾರದರ್ಶಕವಾಗಿ ನಡೆಯಲಿದೆ. ಸಿಸಿ ಕ್ಯಾಮರಾವನ್ನು ಜೋಡಿಸಲಾಗುತ್ತಿದೆ. ಭಕ್ತರು ಬಂಗಾರದ ಕೆಲಸ ನೋಡಲು ಮುಕ್ತ ಅವಕಾಶ ನೀಡಲಾಗಿದೆ. ಭಕ್ತರು ನೀಡುವ ಸಲಹೆಯನ್ನು ಸಹ ಸ್ವೀಕಾರ ಮಾಡಲಾಗುತ್ತದೆ.

ಹಲವು ಭಕ್ತರಿಂದ ಚಿನ್ನದ ಕಾಣಿಕೆ
ಚಿನ್ನದ ಹೊದಿಕೆ ಕಾರ್ಯ 100 ದಿನದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಇದೆ. ಈ ಕಾರ್ಯಕ್ಕೆ ಗಣಿ ಉದ್ಯಮಿ ಪತ್ತಿಕೊಂಡ ಪ್ರಭಾಕರ್ 2 ಕೆಜಿ, ಚೆನ್ನೈನ ಭಾಸ್ಕರ್ ಅವರು 1 ಕೆಜಿ, ಅನಂತ ಸಂಡೂರು ಅವರು 1 ಕೆಜಿ, ರಮೇಶ್ ಪೆಜತ್ತಾಯ ಮತ್ತು ಶ್ರೀನಿವಾಸ ಪೆಜತ್ತಾಯ ಸಹೋದರರು 1 ಕೆಜಿ, ಮುಂಬೈನ ವಿಜಯಾನಂದ ಅವರು 1 ಕೆಜಿ, ಹೈದರಾಬಾದ್ ರಮೇಶ್ 1 ಕೆಜಿ, ಸಮರ್ಪಣ ಸಮೂಹ ಸಂಸ್ಥೆಗಳ ಸಿಇಒ ದಿಲೀಪ್ ಸತ್ಯ 1 ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡಿದರು.












Click it and Unblock the Notifications