ಮೂಕಾಂಬಿಕೆ ಸನ್ನಿಧಿಯಲ್ಲಿ ಸಪ್ತಪದಿ; 4 ಜೋಡಿಗಳ ಕಲ್ಯಾಣ
ಉಡುಪಿ, ಜನವರಿ 06: ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 'ಸಪ್ತಪದಿ' ಉಚಿತ ಸಾಮೂಹಿಕ ವಿವಾಹ ನಡೆಯಿತು. ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಉಚಿತ ಸಾಮೂಹಿಕ ವಿವಾಹ ನಡೆಸಲಾಗುತ್ತದೆ.
ಬುಧವಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿಗಳು ಸಪ್ತಪದಿ ತುಳಿದು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು. ದೇವಾಲಯದ ವತಿಯಿಂದ ವರನಿಗೆ 5 ಸಾವಿರ ರೂ. ಮತ್ತು ವಧುವಿಗೆ 10 ಸಾವಿರ ರೂ. ನೀಡಿ ಗೌರವಿಸಲಾಯಿತು.
ನವ ದಂಪತಿಗೆ ಶ್ರೀ ಮೂಕಾಂಬಿಕೆಗೆ ಪೂಜೆ ಮಾಡಿ ಮಂಗಲಸೂತ್ರ ನೀಡಲಾಯಿತು. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ವಧು-ವರರನ್ನು ಹರಸಿದರು. ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ನವ ವಧು-ವರರನ್ನು ಹಾರೈಸಿದರು.

"ದೇಶದಾದ್ಯಂತ ಸರಳವಾಗಿ ಮದುವೆ ಸಮಾರಂಭಗಳು ನಡೆಯುತ್ತಿವೆ. ಆಡಂಬರದ ಅದ್ದೂರಿಯ ಕಾರ್ಯಕ್ರಮಗಳಿಂದ ಜನ ಸರಳ ಸಮಾರಂಭಕ್ಕೆ ಹೊಂದಿಕೊಳ್ಳುತ್ತಾರೆ, ಇದು ಉತ್ತಮ ಬೆಳವಣಿಗೆ" ಎಂದು ರವಿಶಂಕರ್ ಗುರೂಜಿ ಹೇಳಿದರು.
ಕರ್ನಾಟಕದ ಸರ್ಕಾರದ ಮುಜರಾಯಿ ಇಲಾಖೆ ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಪ್ತಪದಿ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ.












Click it and Unblock the Notifications