ಉಡುಪಿಯ ಕೋಟೇಶ್ವರದಲ್ಲಿ ಅತ್ಯಾಕರ್ಷಕ ಸೂರ್ಯವರ್ತುಲ ವಿಸ್ಮಯ
ಉಡುಪಿ, ಸೆಪ್ಟೆಂಬರ್ 3: ಕೋಟೇಶ್ವರ ಪರಿಸರದ ಜನರಿಗೆ ನಿನ್ನೆ ಮಧ್ಯಾಹ್ನ ಅಪರೂಪದ ಖಗೋಳ ವಿದ್ಯಮಾನವೊಂದು ಗೋಚರಿಸಿತ್ತು. ಪ್ರಖರವಾಗಿ ಬೆಳಗುತಿದ್ದ ಸೂರ್ಯನ ಸುತ್ತ ವರ್ತುಲವೊಂದು ರಚನೆಗೊಂಡಿತ್ತು. ಇದರ ಪರಿಧಿಯಲ್ಲಿ ಕಾಮನ ಬಿಲ್ಲಿನ ಬಣ್ಣ ಮೂಡಿದ್ದು ಅತ್ಯಾಕರ್ಷವಾಗಿ ಕಂಗೊಳಿಸುತ್ತಿತ್ತು.
ಆಗಸದ ಅಲ್ಲಲ್ಲಿ ಚದುರಿದಂತೆ ಮೋಡಗಳ ತುಣುಕುಗಳಿದ್ದು, ತೇವಾಂಶದಿಂದ ಈ ವಿದ್ಯಮಾನ ಸಂಭವಿಸಿದೆ. ಈ ವರ್ತುಲ ಸೂರ್ಯ ಮತ್ತು ರಾತ್ರಿ ವೇಳೆ ಚಂದ್ರನಿಗೂ ಉಂಟಾಗುತ್ತದೆ. ಬೆಳಗಿನ ಹೊತ್ತು ಸೂರ್ಯ ವರ್ತುಲ ಉಂಟಾದರೆ ಮಳೆ ಕಡಿಮೆಯಾಗುತ್ತದೆ, ಸಂಜೆ ಉಂಟಾದರೆ ಹೆಚ್ಚಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಇದನ್ನು ಗಮನಿಸಿದ ಕುಂಭಾಶಿಯ ಸಾವಿತ್ರಮ್ಮ ಎಂಬವರು ನಡು ಮಧ್ಯಾನದಲ್ಲಿ ಸೂರ್ಯವರ್ತುಲ ರಚನೆಗೊಂಡಿದ್ದರಿಂದ ಮಳೆ ಬಿಸಿಲುಗಳು ಜುಗುಲ್ ಬಂದಿ ಉಂಟಾಗಬಹುದು ಎಂದಿದ್ದಾರೆ.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ನಟರಾಜ್ ಈ ಬಗ್ಗೆ ಪ್ರತಿಕ್ರಿಯಿಸಿ, "ಸುಮಾರು 20 ಸಾವಿರ ಅಡಿಗಳ ಎತ್ತರದಲ್ಲಿ ಶೇಖರಣೆಗೊಂಡ ಸಿರ್ರಸ್ ಮೋಡಗಳಲ್ಲಿರುವ ಮಂಜಿನ ತುಣುಕುಗಳ ಮೂಲಕ ಸೂರ್ಯನ ಬೆಳಕಿನ ವಕ್ರೀಭವನದ ಕಾರಣದಿಂದ ಇಂತಹ ವರ್ತುಲ ಉಂಟಾಗುತ್ತದೆ," ಎಂದು ವಿವರಿಸಿದ್ದಾರೆ. ಅವರೇ ಈ ಖಗೋಳ ವಿಸ್ಮಯ ಛಾಯಾಚಿತ್ರವನ್ನೂ ಸೆರೆ ಹಿಡಿದಿದ್ದಾರೆ.












Click it and Unblock the Notifications