ಸ್ನೇಕ್ ಮಾಸ್ಟರ್ ಗೆ ಹಾವು ಕಡಿತ, ಆಸ್ಪತ್ರೆಗೆ ಧಾವಿಸಿದ ಜೋಸೆಫ್
ಉಡುಪಿ, ಸೆಪ್ಟೆಂಬರ್ 4: ಕುಂದಾಪುರದ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹಿಡಿಯಲೆತ್ನಿಸಿದ ಸ್ನೇಕ್ ಮಾಸ್ಟರರಿಗೆ ಹಾವು ಕಡಿದ ಘಟನೆ ಸಂಭವಿಸಿದೆ.
ಇಲ್ಲಿನ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಅವರೇ ಹಾವು ಕಡಿಸಿಕೊಂಡವರು. ಜೋಸೆಫ್ ಅವರ ಬಲಗೈಗೆ ಹಾವು ಕಡಿದಿದ್ದು, ಹಾವಿನ ಸಮೇತ ಅವರು ಆಸ್ಪತ್ರೆಗೆ ತೆರಳಿದ್ದಾರೆ.
ಕುಂದಾಪುರ ತಾಲೂಕಿನ ತಲ್ಲೂರಿನ ಪಾರ್ತಿಕಟ್ಟೆಯ ನಿವಾಸಿಯೊಬ್ಬರ ಮನೆಯ ಹಿತ್ತಲಲ್ಲಿ ಕೊಳಕು ಮಂಡಲ ಹಾವು (ಕುದ್ರಾಳ) ಕಾಣಿಸಿಕೊಂಡಿದೆ. ಹಾವು ಕಂಡು ಮನೆಯವರು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಎಂದೇ ಖ್ಯಾತರಾದ ಜೋಸೆಫ್ ಲೂವಿಸ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಜೋಸೆಫ್ ಅವರು ಹಾವು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಹಾವು ತಪ್ಪಿಸಿಕೊಂಡು ಪೊದೆಯೊಳಗೆ ನುಗ್ಗಿದೆ. ಪೊದೆಗಳನ್ನು ಬಿಡಿಸುತ್ತಿರುವಾಗ ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಮೇಲೆ ದಾಳಿ ಮಾಡಿ ಅವರ ಬಲಗೈಗೆ ಕಡಿದಿದೆ.
ಈ ಸಂದರ್ಭದಲ್ಲಿ ಕ್ಷಣ ಕಾಲ ದಿಗ್ಬ್ರಾಂತರಾದ ಜೋಸೆಫ್ ಕೈಗೊಂದು ಬಟ್ಟೆಯ ಪಟ್ಟಿ ಕಟ್ಟಿಕೊಂಡು ಹರಸಾಹಸ ಪಟ್ಟು ಹಾವನ್ನು ಹಿಡಿದಿದ್ದಾರೆ. ಕೂಡಲೇ ಹಾವಿನೊಂದಿಗೆ ಸ್ಥಳೀಯರ ಸಹಕಾರದಿಂದ ಕುಂದಾಪುರ ಆಸ್ಪತ್ರೆಗೆ ಧಾವಿಸಿದ್ದಾರೆ. ಜೋಸೆಫ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ.
ಅಪತ್ಬಾಂಧವ ಸ್ನೇಕ್ ಮಾಸ್ಟರ್
ಸ್ನೇಕ್ ಮಾಸ್ಟರ್ ಎಂದೇ ಖ್ಯಾತರಾದ ಜೋಸೆಫ್ ಕೆಲವು ವರ್ಷಗಳಿಂದ ಹೆಮ್ಮಾಡಿಯಲ್ಲಿ ರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ಈ ವೃತ್ತಿಯೊಂದಿಗೆ ಹಾವು ಹಿಡಿಯುವ ಕಲೆ ಕೂಡ ಕರಗತ ಮಾಡಿಕೊಂಡಿದ್ದಾರೆ. ತಾಲೂಕಿನಾದ್ಯಂತ 2 ಸಾವಿರಕ್ಕೂ ಹೆಚ್ಚು ವಿಷಪೂರಿತ ಹಾವುಗಳನ್ನು ಹಿಡಿದಿರುವ ಜೋಸೆಫ್, ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರದಿಂದ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.












Click it and Unblock the Notifications