ಶಬರಿಗಿರಿ ಆಂದೋಲನ: ಕೃಷ್ಣನೂರಿಗೆ ಆಗಮಿಸಲಿದ್ದಾರೆ ಕೇರಳದ ಪಂದಳ ರಾಜ
Recommended Video

ಉಡುಪಿ, ಅಕ್ಟೋಬರ್. 22: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಈ ತೀರ್ಪು ಹೊರಬಂದ ಬಳಿಕ ಮೊದಲ ಬಾರಿಗೆ ಅಕ್ಟೋಬರ್ 17 ರಂದು 5 ದಿನಗಳ ಕಾಲ ಅಯ್ಯಪ್ಪನ ಸನ್ನಿಧಾನದ ಬಾಗಿಲು ತೆರೆದಿತ್ತು.
ಈ ಐದು ದಿನಗಳ ಕಾಲ ದೇವಾಲಯವನ್ನು ಪ್ರವೇಶಿಸಲು ಮುಂದಾದ 12 ಮಹಿಳೆಯರ ಪ್ರಯತ್ನವನ್ನು ಅಯ್ಯಪ್ಪನ ಭಕ್ತರು ವಿಫಲಗೊಳಿಸಿದ್ದರು. ಇಂದು ಸೋಮವಾರ ಸನ್ನಿಧಾನದಲ್ಲಿ ಅಯ್ಯಪ್ಪನ ದರ್ಶನಕ್ಕೆ ಕೊನೆಯ ದಿನವಾಗಿದ್ದು, ರಾತ್ರಿ 10ಕ್ಕೆ ಮತ್ತೆ ಶಬರಿಮಲೆ ದೇವಾಲಯ ಬಂದ್ ಆಗಲಿದೆ.
ಆದರೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿಚಾರ ಕುರಿತು ಹೋರಾಟ ಮುಂದುವರೆಯಲಿದೆ. 5 ರಾಜ್ಯಗಳಲ್ಲಿ ಬೃಹತ್ ಜನಾಂದೋಲನ ರೂಪಿಸಲು ಅಯ್ಯಪ್ಪ ಭಕ್ತರು ತೀರ್ಮಾನಿಸಿದ್ದಾರೆ.

ಈ ಮೂಲಕ ದೇಶಾದ್ಯಂತ ಶಬರಿಗಿರಿ ಆಂದೋಲನ ಆರಂಭಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ ಜನಾಂದೋಲನಾ ಜಾಥಾ ಮತ್ತು ಬೃಹತ್ ಸಭೆ ಕೃಷ್ಣನೂರು ಉಡುಪಿಯಲ್ಲಿ ನವೆಂಬರ್ 1ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಉಡುಪಿಯ ಕೃಷ್ಣಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನವೆಂಬರ್ 1ಕ್ಕೆ ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಇದೇ ರೀತಿಯ ಜನಾಂದೋಲನ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ನಡೆಯಲಿದೆ ಎಂದು ಅಯ್ಯಪ್ಪ ಸೇವಾ ಸಮಾಜಂ ಸಂಚಾಲಕ ಗಿರೀಶ್ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವೆಂಬರ್ 1 ರಂದು ಉಡುಪಿಗೆ ಕೇರಳದ ಪಂದಳ ರಾಜ ಆಗಮಿಸಲಿದ್ದು, ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೇಶದ ಐದು ರಾಜ್ಯಗಳಲ್ಲಿ ಜನಾಂದೋಲನ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದಲ್ಲಿ ಜನಾಂದೋಲನಕ್ಕಾಗಿ ಉಡುಪಿ ಜಿಲ್ಲೆಯನ್ನು ಆಯ್ಕೆಮಾಡಲಾಗಿದೆ ಎಂದು ಗಿರೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಿಂದ ತಲಾ 20 ಸಾವಿರ ಜನರಂತೆ ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದೆ. ಮೈದಾನದಲ್ಲಿ ಅಯ್ಯಪ್ಪನಿಗೆ ಸಹಸ್ರ ಅರ್ಚನೆ ನಡೆಯಲಿದ್ದು, ಇದಕ್ಕಾಗಿ 10 ಲಕ್ಷ ರೂಪಾಯಿಯನ್ನು ಭಕ್ತರೇ ದೇಣಿಗೆ ರೂಪದಲ್ಲಿ ಸಂಗ್ರಹಿಸುವ ನಿರ್ಧಾರ ಮಾಡಿದ್ದಾರೆ.












Click it and Unblock the Notifications