ಉಡುಪಿ: ಮದುವೆ ಮಂಟಪಕ್ಕೆ ತೆರಳಿ ಬಾಲ್ಯ ವಿವಾಹ ತಡೆ
ಉಡುಪಿ, ಡಿಸೆಂಬರ್ 31: ಕರಾವಳಿ ಮಟ್ಟಿಗೆ ಅಪರೂಪ ಎನ್ನಬಹುದಾದ ಘಟನೆಯೊಂದು ಗುರುವಾರ (ಡಿ.31) ನಡೆದಿದೆ. ಹಸೆಮಣೆಯೇರಲು ನವ ಜೋಡಿ ಯತ್ನಿಸುತ್ತಿದ್ದಾಗ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಮದುವೆ ನಿಲ್ಲಿಸಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗುಡ್ಡೆಯಂಗಡಿ ಎಂಬಲ್ಲಿ 28 ವರ್ಷದ ಯುವಕ 17ರ ಬಾಲಕಿಯನ್ನು ಮದುವೆಯಾಗಲು ಸಿದ್ಧತೆ ನಡೆದಿತ್ತು. ಎರಡು ಕುಟುಂಬದ ಸುಮಾರು 200 ಜನ ಮದುವೆಗೆ ಆಗಮಿಸಿದ್ದರು. ಆದರೆ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಮತ್ತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಾಲ್ಯವಿವಾಹಕ್ಕೆ ತಡೆಯೊಡ್ಡಿದರು.

ಅಧಿಕಾರಿಗಳು ಎರಡೂ ಕಡೆಯ ಪೋಷಕರಿಗೆ ಬಾಲ್ಯವಿವಾಹದ ಕುರಿತು ತಿಳಿ ಹೇಳಿ ಮನದಟ್ಟು ಮಾಡಿ, ಅಧಿಕಾರಿಗಳು ಮತ್ತು ಪೊಲೀಸರು ಮದುವೆ ನಿಲ್ಲಿಸುವಂತೆ ಸೂಚಿಸಿದರು. ಪ್ರಾರಂಭದಲ್ಲಿ ತಬ್ಬಿಬ್ಬಾದ ಪೋಷಕರು ಬಳಿಕ ಅಧಿಕಾರಿಗಳ ಮಾತಿಗೆ ಶರಣಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾದರು.

ಕೊನೆಗೆ ಕುಟುಂಬಿಕರಿಂದ ಮತ್ತು ಹಾಲ್ ಮಾಲೀಕರು ಮತ್ತು ಪುರೋಹಿತರಿನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಶೋಭಾ ಶೆಟ್ಟಿ, ಪ್ರಭಾವತಿ, ಅಂಗನವಾಡಿ ಮೇಲ್ವಿಚಾರಕಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications