ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಿರೋದು ನಿಜಾನಾ ಸುಳ್ಳಾ?
ಉಡುಪಿ, ಡಿಸೆಂಬರ್ 30 : ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಚರ್ಚೆ.. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರುತ್ತಿದ್ದಾರೆ ಎಂಬ ವಿಚಾರ. ಈ ವಿಚಾರದ ಕುರಿತು ಸ್ವತಃ ಸಚಿವ ಪ್ರಮೋದ್ ಮಧ್ವರಾಜ್ ಏನ್ ಹೇಳಿದ್ದಾರೆ ಗೊತ್ತಾ?
ಈ ಬಗ್ಗೆ ಶುಕ್ರವಾರ ಮಾತನಾಡಿದ ಅವರು, ' ನನ್ನನ್ನ ಬಿಜೆಪಿ ಪಕ್ಷಕ್ಕೆ ಕರೆಸಿಕೊಳ್ಳುವ ಯಾವ ಪ್ರಯತ್ನ ನಡೆದಿಲ್ಲ. ಬಿಜೆಪಿಯ ಯಾವ ನಾಯಕರು ಕೂಡಾ ನನ್ನ ಜೊತೆ ಈ ಕುರಿತು ಮಾತನಾಡಿಲ್ಲ. ನಾನು ಕೂಡಾ ಈ ಬಗ್ಗೆ ಯೋಚಿಸಿಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಂತಹ ಸುದ್ದಿ 'ಕುಚೇಷ್ಟೆ'ಯಿಂದ ಕೂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಈ ಸುಳ್ಳು ಸುದ್ದಿಯ ಹಿಂದೆ ನನಗಾಗದವರ ದುರುದ್ದೇಶ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಸಿಕ್ಕಿದರೆ ಉಭಯ ಕುಶಲೋಪಚಾರಿ ವಿಚಾರಿಸುತ್ತೇವೆ ಹೊರತು ರಾಜಕೀಯದ ಬಗ್ಗೆ ಮಾತನಾಡಲ್ಲ. ಇಂಥ ಸುದ್ದಿ ಅದ್ಹೇಗೆ ಹಬ್ಬಿದೆಯೋ ಗೊತ್ತಿಲ್ಲ ಎಂದು ಅವರು ಗರಂ ಆದರು.
ಮಧ್ವರಾಜ್ ಆಕ್ರೋಶಕ್ಕೆ ಕಾರಣ ಏನು..?
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ರನ್ನ ಕಣಕ್ಕಿಳಿಸಲಾಗುತ್ತೆ ಎಂಬ ವಿಚಾರ ಹರಿದಾಡುತ್ತಿತ್ತು. ಇದಕ್ಕೆ ಕಾರಣ ಇವರ ತಾಯಿ ಹಿರಿಯ ರಾಜಕಾರಣಿ ಮನೋರಮಾ ಮಧ್ವರಾಜ್.
ಮನೋರಮಾಗೆ ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರ ಜೊತೆ ಉತ್ತಮ ಬಾಂಧವ್ಯ, ಸಂಪರ್ಕ ಇದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರ ಬೆಂಬಲದೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗನನ್ನೇ ಕಣಕ್ಕಿಳಿಸುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಕೊನೆಗೂ ಇದು ಸುಳ್ಳು ಎಂಬುದನ್ನು ಸ್ವತಃ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications