ಉಡುಪಿಯಲ್ಲಿ ಅಂತ್ಯಕ್ರಿಯೆಗೆ ಮಹಾರಾಷ್ಟ್ರದಿಂದ ಬಂದ ಜನ
ಉಡುಪಿ, ಏಪ್ರಿಲ್ 30: ಉಡುಪಿಯ ಕಾರ್ಕಳ ತಾಲ್ಲೂಕಿನ ಶವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 24 ಮಂದಿಯನ್ನು ಇಂದು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದರೂ ಮಹಾರಾಷ್ಟ್ರದಿಂದ ಮೃತರ ಅಂತ್ಯಕ್ರಿಯೆಗೆ ಬಂದವರನ್ನೂ ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಏಪ್ರಿಲ್ 28 ರಂದು ಮರ್ಣೆ ಗ್ರಾಮದ ಅಜೆಕಾರು ಕುರ್ಪಾಡಿ ಮಹಾಬಲ ಶೆಟ್ಟಿ ಎಂಬುವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಮುಂಬೈನಿಂದ ಮೃತದೇಹವನ್ನು ಬುಧವಾರ ಹುಟ್ಟೂರಿಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಕೊರೊನಾ ಸೋಂಕು ಹೆಚ್ಚಿರುವ ಮುಂಬೈಯಿಂದ ಶವ ತಂದಿರುವುದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮೃತ ದೇಹದೊಂದಿಗೆ ಮುಂಬೈಯಿಂದ ಬಂದಿರುವ 6 ಮಂದಿಗೂ ಕ್ವಾರಂಟೈನ್ ಮಾಡಲಾಯಿತು. ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನುಷಾ ಶೆಟ್ಟಿ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಅಂತ್ಯಕ್ರಿಯೆಯಲ್ಲಿ ಪಂಚಾಯತ್ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಮತ್ತು ಸ್ಥಳೀಯ ಎಸ್ಐ ಕೂಡ ಭಾಗಿಯಾಗಿದ್ದರು. ಇದೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಮತ್ತಿಬ್ಬರಿಗೂ ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ಗೆ ಒಳಗಾದ ಉಳಿದ ಹದಿನಾರು ಜನ ಬೆಳ್ಮಣ್ ನವರಾಗಿದ್ದಾರೆ.