ಸಿಎಎ ವಿರೋಧಿಸಿ ಉಡುಪಿಯಲ್ಲಿ ಶಾಂತಿಯುತ ಪ್ರತಿಭಟನೆ
ಉಡುಪಿ, ಮಾರ್ಚ್ 12: ಎನ್ಪಿಆರ್, ಎನ್ಆರ್ಸಿ ಮತ್ತು ಸಿಎಎ ರದ್ದುಗೊಳಿಸುವಂತೆ ಆಗ್ರಹಿಸಿ ಉಡುಪಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು.
ಸಹಬಾಳ್ವೆ ಸಂಘಟನೆ ವತಿಯಿಂದ ಒಂದು ದಿನದ ಸತ್ಯಾಗ್ರಹಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು. ಮುಖ್ಯವಾಗಿ ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದ ಮಾರ್ಚ್ 12 ನೇ ರಂದು ಸಾಂಕೇತಿಕವಾಗಿ ಈ ಸತ್ಯಾಗ್ರಹ ನಡೆಯುತ್ತಿದೆ.
ಬೆಳಿಗ್ಗೆ ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರಾರಂಭಗೊಂಡ ಉಪವಾಸ ಸತ್ಯಾಗ್ರಹ, ಸಂಜೆ ಆರು ಗಂಟೆ ತನಕ ನಡೆಯಲಿದೆ. ಇದೇ ವೇಳೆ ಮಾತನಾಡಿದ ನಾಡಿನ ಖ್ಯಾತ ಚಿಂತಕ ಜಿ.ರಾಜಶೇಖರ್, ""ಗಾಂಧೀಜಿಯ ಅಹಿಂಸೆಯ ಮಾರ್ಗದಲ್ಲೇ ದೇಶದ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ'' ಎಂದರು.

ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಗಲಭೆ ನಡೆಯಿತು. ಅಲ್ಲಿ ಮೃತಪಟ್ಟವರು ಹಿಂದೂ ಮುಸ್ಲಿಮರಲ್ಲ, ಭಾರತೀಯರು ಎಂದು ನಿನ್ನೆ ಗೃಹ ಸಚಿವರು ಹೇಳಿದ್ದಾರೆ. ಆದರೆ ಇಂತಹ ಸಂವಿಧಾನ ವಿರೋಧಿ ಮಸೂದೆ ತರುವಾಗ ಕೇಂದ್ರ ಸರಕಾರಕ್ಕೆ ಇದು ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಇವತ್ತು ಮಹಾತ್ಮ ಗಾಂಧೀಜಿಯವರು ದಂಡಿಯಾತ್ರೆ ನಡೆಸಿದ ದಿನ. ನಾವು ಗಾಂಧಿ ಅನುಯಾಯಿಗಳು, ಸಂವಿಧಾನ ವಿರೋಧಿ ಮಸೂದೆಯನ್ನು ಹಿಂಪಡೆಯುವ ತನಕ ನಮ್ಮ ಹೋರಾಟ ಶಾಂತಿಯುತವಾಗಿ ನಡೆಯಲಿದೆ ಎಂದರು.












Click it and Unblock the Notifications