ಶಿರೂರಿನಲ್ಲಿ ಪತ್ತೆಯಾಗಿದ್ದು ರದ್ದಾದ ಪಡಿತರ ಚೀಟಿಗಳಂತೆ!
ಉಡುಪಿ, ಜೂನ್.22: ಬೈಂದೂರು ತಾಲೂಕಿನ ಶಿರೂರು ಗ್ರೀನ್ ವ್ಯಾಲಿ ಶಾಲೆ ಎದುರು ಹೆದ್ದಾರಿ ಸಮೀಪದ ಹಳ್ಳದಲ್ಲಿ ಗೋಣಿ ಚೀಲವೊಂದರಲ್ಲಿ ಸಾವಿರಾರು ಪಡಿತರ ಚೀಟಿ ಪತ್ತೆಯಾಗಿದ್ದವು. ಈ ಪಡಿತರ ಚೀಟಿಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಇದೆಲ್ಲವೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ಬಾಳ ಕ್ಷೇತ್ರದ ಪಡಿತರ ಚೀಟಿಗಳೆಂದು ಗೊತ್ತಾಗಿದೆ. ತಕ್ಷಣ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶಿರೂರು ಹೆದ್ದಾರಿ ಬದಿಯಲ್ಲಿ ಸಾವಿರಾರು ಪಡಿತರ ಚೀಟಿಗಳು ಪತ್ತೆ
ಪಡಿತರ ಚೀಟಿಗಳು 2003-2004 ಇಸವಿಯದಾಗಿದ್ದು ಬಹುತೇಕ ಎಲ್ಲವೂ ರದ್ದಾದ ಪಡಿತರ ಚೀಟಿ ಎನ್ನಲಾಗುತ್ತಿದೆ. ರದ್ದಾದ ಪಡಿತರ ಕಾರ್ಡ್ ವಿಲೇವಾರಿ ಮಾಡಿದ ರೀತಿ ತಪ್ಪಾಗಿದ್ದು, ಕಾನೂನು ಪ್ರಕಾರ ಈ ಮಾದರಿ ವಿಲೇವಾರಿ ಸರಿಯಲ್ಲ.
ವಿಲೇವಾರಿ ವೇಳೆ ವಾಹನದಿಂದ ಚೀಲ ಬಿದ್ದಿರುವ ಸಾಧ್ಯತೆ ಇದೆ. ರೇಷನ್ ಕಾರ್ಡ್ ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಮಾಡದಿರೋದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.
ವ್ಯವಸ್ಥಿತವಾಗಿ ರದ್ದಾದ ಕಾರ್ಡ್ ವಿಲೇವಾರಿ ಮಾಡಬೇಕಿತ್ತು. ಕ್ಯಾನ್ಸಲ್ ಆದ ಕಾರ್ಡುಗಳನ್ನು ಗುಜರಿಗೆ ನೀಡಿದ ಹಾಗಿದೆ. ಗುಜರಿಯವರು ಸಾಗಿಸುವ ವೇಳೆ ವಾಹನದಿಂದ ಗೋಣಿ ಚೀಲ ಬಿದ್ದಿರುವ ಸಾಧ್ಯತೆಯೂ ಇದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ.