ಟಿಪ್ಪು ಜಯಂತಿ: ವಿವಾದಕ್ಕೆ ಕಾರಣವಾದ ಪ್ರಮೋದ್ ಮಧ್ವರಾಜ್ ಗೈರು
ಉಡುಪಿ, ನವೆಂಬರ್ 10: ಉಡುಪಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗೈರಾಗಿರುವುದು ವಿವಾದಕ್ಕೆ ಕಾರಣವಾಗಿದೆ.
In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ
ಉಡುಪಿ ಜಿಲ್ಲೆಯ ಮಣಿಪಾಲದ ರಜತಾದ್ರಿಯಲ್ಲಿ ಉಡುಪಿ ಜಿಲ್ಲಾಡಳಿತ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗೈರಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಲ್ಲು ತೂರಾಟ, ಪ್ರತಿಭಟನೆ ನಡುವೆ ಕೊಡಗಿನಲ್ಲಿ ಟಿಪ್ಪು ಜಯಂತಿ
ಸರ್ಕಾರದ ಅಧಿಕೃತ ಕಾರ್ಯಕ್ರಮಕ್ಕೆ ಸಚಿವರೇ ಗೈರಾಗಿರುವುದು ಹಲವು ಅನುಮಾನಗಳನ್ನೂ ಹುಟ್ಟುಹಾಕಿದೆ.
ಆಹ್ವಾನ ನೀಡಿದರೂ ಬರದ ಸಚಿವರು
ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅಧಿಕೃತವಾಗಿ ಸಭೆಗೆ ಸಚಿವರನ್ನು ಆಹ್ವಾನಿಸಿತ್ತು. ಅದಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನಿಲಭಾಗ್ಯ ಯೋಜನೆಯ ಅನುಷ್ಠಾನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವ ಕುರಿತು ಸಚಿವರಿಗೆ ವಿವರ ಕೂಡ ನೀಡಲಾಗಿತ್ತು.
ಆದರೆ ಸಚಿವ ಪ್ರಮೋದ್ ಮಧ್ವರಾಜ್ ಪಾಂಬೂರಿನ ಕಾರ್ಯಕ್ರಮ ಮತ್ತು ಜಿಲ್ಲಾಧಿಕಾರಿ ಕಚೇರಿಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರೂ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಗೈರಾಗಿರುವುದು ಈಗ ಮುಸ್ಲಿಂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಮುಸ್ಲಿಂ ಮುಖಂಡರ ಆಕ್ರೋಶ
ಕಳೆದ ಮೂರು ವರ್ಷದಿಂದ ಜಿಲ್ಲಾಡಳಿತ ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮೂರು ವರ್ಷಗಳಿಂದಲೂ ಈ ಕಾರ್ಯಕ್ರಮ ಕ್ಕೆ ಗೈರಾಗುತ್ತಿರುವುದು ಮುಸ್ಲಿಂ ಸಮುದಾಯದ ಮುಖಂಡರ ಕಣ್ಣು ಕೆಂಪಾಗಿಸಿದೆ.
ಟಿಪ್ಪು ಜಯಂತಿ ಕಾರ್ಯಕ್ರಮ ಮುಗಿದು 10 ನಿಮಿಷದ ನಂತರ ಆರಾಮವಾಗಿ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.
ಹಾಜರಿ ಇರಬೇಕಾಗಿಲ್ಲ
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮಧ್ವರಾಜ್, "ಸರ್ಕಾರದ ವತಿಯಿಂದ ಬೇರೆ ಬೇರೆ ಆಚರಣೆಗಳು ನಡೆಯುತ್ತದೆ. ಎಲ್ಲಾ ಜಯಂತಿಯಲ್ಲಿ ಉಸ್ತುವಾರಿ ಮಂತ್ರಿಗಳು ಪಾಲ್ಗೊಳ್ಳುವುದು ಕಡ್ಡಾಯವೇನಲ್ಲ," ಎಂದು ಹೇಳಿದ್ದಾರೆ.
"ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಕೆಂಪೇಗೌಡ ಜಯಂತಿ, ಭಗೀರಥ ಜಯಂತಿ, ವಾಲ್ಮೀಕಿ ಜಯಂತಿಗೆ ಗೈರಾಗಿದ್ದೆ. ಆವಾಗೆಲ್ಲ ಈ ವಿವಾದ ಇರಲಿಲ್ಲ. ಟಿಪ್ಪು ಜಯಂತಿ ಸರ್ಕಾರದ ಪ್ರತಿಷ್ಠೆ ಎಂದು ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ವಿವಾದ ಮಾಡುವವರು ಮಾಡಿಕೊಳ್ಳುತ್ತಾರೆ.
ಅವರವರಿಗೆ ಅವರವರ ಅಭಿಪ್ರಾಯವಿದೆ," ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗೈರು ಉದ್ದೇಶಪೂರ್ವಕವಲ್ಲ
ಮೂರೂ ಟಿಪ್ಪು ಜಯಂತಿಯಲ್ಲೂ ನಾನು ಪಾಲ್ಗೊಂಡಿಲ್ಲ. ಇವತ್ತು ಪೂರ್ವ ನಿಗದಿತ ಕಾರ್ಯಕ್ರಮ ಇತ್ತು. ಬೇಗ ಬರಲು ಪ್ರಯತ್ನಪಟ್ಟೆ ಸಾಧ್ಯವಾಗಿಲ್ಲ. ಉದ್ದೇಶ ಪೂರ್ವಕ ಗೈರು ಯಾಕೆ ಆಗಬೇಕು? ನನ್ನ ಬಗ್ಗೆ ಮಾಧ್ಯಮದವರು ವಿಮರ್ಶೆ ಮಾಡುವುದಾದರೆ ನನ್ನ ಅಭ್ಯಂತರವಿಲ್ಲ ಎಂದು ಅವರು ಹೇಳಿದ್ದಾರೆ.
ಈ ನಡುವೆ ಟಿಪ್ಪು ಸುಲ್ತಾನ್ ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು
ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂದೆಯೇ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.