ಇಂದಿನಿಂದ ಉಡುಪಿಯಲ್ಲಿ ಹೊರ ರಾಜ್ಯದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ
ಉಡುಪಿ, ಜೂನ್ 10: ಬೇರೆ ರಾಜ್ಯದಿಂದ ಬಂದವರಿಗೆ ವಿಧಿಸುತ್ತಿದ್ದ ಸಾಂಸ್ಥಿಕ ಕ್ವಾರಂಟೈನ್ ಇಂದಿನಿಂದ ರದ್ದಾಗಿದೆ. ಇಂದು ಸಾಂಸ್ಥಿಕ ಕ್ವಾರಂಟೈನ್ ಇರುವವರನ್ನು ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ. ಸುಮಾರು ಸಾವಿರದ ನೂರು ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಕಳಿಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಈಗಾಗಲೇ ಶಾಲೆ ಹಾಗೂ ಹಾಸ್ಟೆಲ್ ಗಳ ಕ್ವಾರಂಟೈನ್ ಸೆಂಟರ್ ಸ್ಥಗಿತವಾಗಿದೆ. ಎಲ್ಲಾ ಶಾಲಾ ಕಾಲೇಜುಗಳನ್ನು disinfection ಮಾಡಲಾಗಿದೆ. SSLC ಪರೀಕ್ಷೆಯ ಮೂರು ದಿನ ಮುನ್ನ ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತದೆ. ಪರೀಕ್ಷಾ ಕಾಲದಲ್ಲಿ ಪ್ರತಿ ದಿನ ಸ್ಯಾನಿಟೈಸ್ ಮಾಡುತ್ತೇವೆ. ಪೋಷಕರಿಗೆ ಯಾವುದೇ ಆತಂಕ ಬೇಡ" ಎಂದು ಹೇಳಿದರು.
ಉಡುಪಿ: ಕೊರೊನಾ ವೈರಸ್ ನಿಂದ 9 ಜನ ಪೊಲೀಸರು ಗುಣಮುಖ
ಸದ್ಯ ಪ್ರತೀ ತಾಲೂಕಿನಲ್ಲಿ ಒಂದು ರಿಸೀವಿಂಗ್ ಸೆಂಟರ್, ಮೂರು ಕ್ವಾರಂಟೈನ್ ಸೆಂಟರ್ ಇರಲಿವೆ. SSLC ಪರೀಕ್ಷೆ ನಡೆಯುವ ಯಾವುದೇ ಶಾಲೆ ಕ್ವಾರಂಟೈನ್ ಸೆಂಟರ್ ಆಗಿ ಉಳಿದಿಲ್ಲ. ಜಿಲ್ಲೆಯಲ್ಲಿ 14,034 ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಒಟ್ಟು 51 ಪರೀಕ್ಷಾ ಕೇಂದ್ರವಿದೆ ಎಂದು ತಿಳಿಸಿದರು.
ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಆಸ್ಪತ್ರೆಗಳು ಹಣ ಪೀಕುತ್ತಿವೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ ಡಿಸಿ, ಜಿಲ್ಲಾಡಳಿತ ಅಥವಾ ಕೋವಿಡ್ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ಒಂದು ರುಪಾಯಿ ಹಣವನ್ನೂ ಯಾರಿಂದಲು ಪಡೆದಿಲ್ಲ. ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗಿತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಅನಿವಾರ್ಯ. ಹುಷಾರ್ ಎಂದು ಎಚ್ಚರಿಕೆ ನೀಡಿದರು.