ಪೆರ್ಡೂರು ಅನಂತ ಪದ್ಮನಾಭನ ದೇಗುಲದಲ್ಲಿ ಮಧುಮಕ್ಕಳ ಜಾತ್ರೆ
ಉಡುಪಿ, ಆಗಸ್ಟ್ 18: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದಲ್ಲಿ ಮಧುಮಕ್ಕಳ ಜಾತ್ರೆ ನಡೆದಿದೆ. ಇದು ಸಿಂಹ ಸಂಕ್ರಮಣ ದಿನದ ವಿಶೇಷ.
ಕರಾವಳಿಯಲ್ಲಿ ಆಷಾಢ ಕಳೆದು ಶ್ರಾವಣ ಮಾಸದ ಆಗಮನವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಕ್ರಮಣದ ಸಂಭ್ರಮ ಜೋರಾಗಿತ್ತು.

ಮಧುಮಕ್ಕಳ ಜಾತ್ರೆ ನಡೆಯುವುದು ಕದಳಿಪ್ರಿಯನ ಸನ್ನಿಧಾನದಲ್ಲಿನ ವಿಶೇಷ. ಉಡುಪಿಯ ಪೆರ್ಡೂರಿನಲ್ಲಿ ಮಧುಮಕ್ಕಳ ಜಾತ್ರೆ ಸಂಭ್ರಮ ಕಳೆ ಕಟ್ಟಿತ್ತು. ಆಷಾಢ ಮಾಸಕ್ಕೆ ತವರಿಗೆ ತೆರಳಿದ ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುವ ಸಮಯವಿದು.
ತವರಿನಿಂದ ಮತ್ತೆ ಗಂಡನ ಮನೆಗೆ ತೆರಳುವ ವೇಳೆಯಲ್ಲಿ ಬಾಳೆಹಣ್ಣಿಗೆ ಒಲಿಯುವ ಕದಳಿಪ್ರಿಯ ಅನಂತ ಪದ್ಮನಾಭ ಪೂಜೆ ಸಲ್ಲಿಸಿದರೆ ಮುಂದಿನ ದಾಂಪತ್ಯ ಸುಖಮಯವಾಗಿರುತ್ತದೆ ಎಂಬ ನಂಬಿಕೆಯಿದೆ. ಕಳೆದ ಅವಧಿಯಲ್ಲಿ ಮದುವೆಯಾದ ಸಾವಿರಾರು ಜೋಡಿಗಳು ಸಂತಾನ ಪ್ರಾಪ್ತಿ, ಆರೋಗ್ಯ ಭಾಗ್ಯಕ್ಕಾಗಿ ಜಾತ್ರೆಯಲ್ಲಿ ಸಂಭ್ರಮದಿಂದ ಭಾಗವಹಿಸಿದರು.
ಪ್ರತೀ ವರ್ಷ ಸಿಂಹ ಸಂಕ್ರಮಣ ಆಚರಣೆಯನ್ನು ಈ ಕ್ಷೇತ್ರದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಯಿಂದ ಸಾವಿರಾರು ಜೋಡಿಗಳು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಗೊನೆಹಣ್ಣು, ಸಿಬ್ಲು ಹಣ್ಣು, ಸಾವಿರಕಾಯಿ ಬಾಳೆಹಣ್ಣು ಮೊದಲಾದ ಸೇವೆಯನ್ನು ದೇವರಿಗೆ ಸಲ್ಲಿಸಿ ತಮ್ಮ ಬೇಡಿಕೆಯನ್ನು ಪೂರೈಸುವಂತೆ ಪ್ರಾರ್ಥಿಸುತ್ತಾರೆ. ತಿರುಪತಿಗೆ ಹೋಗುವುದಕ್ಕೆ ಕಷ್ಟವಾದ ಭಕ್ತರು ಇಲ್ಲಿ ಹರಕೆ ಸಲ್ಲಿಸಿದರೆ ಅದು ತಿರುಪತಿ ವೆಂಕಟೇಶನಿಗೆ ಸಲ್ಲುತ್ತದೆ ಎನ್ನುವ ನಂಬಿಕೆ ಕೂಡ ಇಲ್ಲಿ ಜನಜನಿತ.
ದಾಂಪತ್ಯ ಜೀವನ ನಂಬಿಕೆ ಮೇಲೆ ನಡೆಯುತ್ತದೆ. ಭಗವಂತನ ಆಶೀರ್ವಾದ ಮತ್ತಷ್ಟು ಬಲ ನೀಡುತ್ತದೆ ಎನ್ನುವುದು ಜನರ ನಂಬಿಕೆ. ಭಕ್ತಿ, ನಂಬಿಕೆ ಮೇಲೆ ಇಲ್ಲಿ ನಡೆಯುವ ಮಧುಮಕ್ಕಳ ಜಾತ್ರೆ ಅಪರೂಪ ಹಾಗೂ ಅರ್ಥಪೂರ್ಣ ಆಚರಣೆ.












Click it and Unblock the Notifications