ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ತಿರುವು
ಉಡುಪಿ, ಆಗಸ್ಟ್ 17 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿ ಮತ್ತು ಮಗನಿಗೆ ಭಾಸ್ಕರ್ ಶೆಟ್ಟಿ ಅವರು ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಸರ್ಕಾರ ಈ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.
ಭಾಸ್ಕರ್ ಶೆಟ್ಟಿ ಅವರ ಅತ್ತೆ ಸುಮತಿ ಶೆಟ್ಟಿ ಅವರು, 'ವಿಚ್ಛೇಧನ ನೀಡದಿದ್ದರೆ ಕೊಲೆ ಮಾಡುವುದಾಗಿ ಭಾಸ್ಕರ್ ಶೆಟ್ಟಿ ಮಗಳನ್ನು ಬೆದರಿಸುತ್ತಿದ್ದ. ಆಕೆಯ ಪ್ರಾಣವೂ ಅಪಾಯದಲ್ಲಿತ್ತು. ಕೊಲೆ ಮಾಡಿದ್ದರೂ ಪ್ರಾಣ ರಕ್ಷಣೆಗಾಗಿ ಮಾಡಿರಬಹುದು' ಎಂದು ಹೇಳಿದ್ದಾರೆ.[ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ]
'ಅಳಿಯನಿಗೆ ನರ್ಸ್ವೊಬ್ಬಳ ಜೊತೆ ಸಂಬಂಧವಿತ್ತು. ಅವರಿಗೆ ಮೂರು ವರ್ಷದ ಮಗಳು ಇದ್ದಾಳೆ. ಮಂಗಳೂರಿನಲ್ಲಿ ಆಕೆಗೆ ಮನೆಯನ್ನು ಕೊಡಿಸಿದ್ದ. ಉಡುಪಿಯ ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿ ಪತ್ನಿಯೊಂದಿಗೆ ತಂದೆ ಇದ್ದದ್ದು ನೋಡಿ ನವನೀತ್ ಗಲಾಟೆಯನ್ನು ಮಾಡಿದ್ದ' ಎಂದು ಸುಮತಿ ಶೆಟ್ಟಿ ತಿಳಿಸಿದ್ದಾರೆ.[ಭಾಸ್ಕರ್ ಶೆಟ್ಟಿ ಹತ್ಯೆ, 2 ಕೋಟಿ ಹಣ ವರ್ಗಾವಣೆ ಬಗ್ಗೆ ತನಿಖೆ]
'ನನ್ನ ಮಗಳು ರಾಜೇಶ್ವರಿ ಕೊಲೆ ಮಾಡಿದ್ದಾಳೆ ಎಂದರೆ ನಾನು ನಂಬುವುದಿಲ್ಲ. ವಿಚ್ಛೇಧನಕ್ಕಾಗಿ ಬೆದರಿಕೆ ಹಾಕುತ್ತಿದ್ದ ಕಾರಣಕ್ಕಾಗಿ ಅವಳ ಜೀವಕ್ಕೂ ಅಪಾಯವಿತ್ತು. ಒಂದು ವೇಳೆ ಕೊಲೆ ಮಾಡಿದ್ದರೂ ಅದು ಸ್ವ ರಕ್ಷಣೆಗಾಗಿ ಮಾಡಿರಬಹುದು' ಎಂದು ಸುಮತಿ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್, ಜ್ಯೋತಿಷಿ ನಿರಂಜನ್ ಭಟ್, ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರನನ್ನು ಬಂಧಿಸಲಾಗಿದೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಮೊದಲು ಮಣಿಪಾಲ ಪೊಲೀಸರು ನಡೆಸುತ್ತಿದ್ದರು. ಕರ್ನಾಟಕ ಸರ್ಕಾರ ಆಗಸ್ಟ್ 16ರಂದು ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ. ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.