ಉಡುಪಿ: ದೇವಸ್ಥಾನದ ಬ್ರಹ್ಮಕಲಶಕ್ಕೆ ಸಹಕರಿಸಿದ ಮುಸ್ಲಿಂ ಕುಟುಂಬ
ಉಡುಪಿ, ಜನವರಿ 22: ಕೋಮು ಸೌಹಾರ್ಧ ಘಟನೆಯೊಂದಕ್ಕೆ ಉಡುಪಿ ಸಾಕ್ಷಿಯಾಗಿದೆ. ಇಲ್ಲಿನ ಹೂಡೆ ಸಮೀಪದ ಕೋಡಿಬೇಂಗ್ರೆ ಯಾಸೀನ್ ಕುಟುಂಬ ಸ್ಥಳೀಯ ದೇವಸ್ಥಾನದ ಬ್ರಹ್ಮಕಲಶಕ್ಕೆ ಸಹಕರಿಸಲು ತಮ್ಮ ಮದುವೆಯನ್ನೇ ಶಿಫ್ಟ್ ಮಾಡಿ ಉದಾರವಾಗಿ ನಡೆದುಕೊಂಡಿದೆ.[ಸೌಹಾರ್ದಯುತ ಭಟ್ಕಳ ಹನುಮ ರಥೋತ್ಸವಕ್ಕೆ ಸಿದ್ಧತೆ]
ಕೋಡಿಬೇಂಗ್ರೆಯಲ್ಲಿರುವ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಇಲ್ಲಿನ ಸ್ಥಳೀಯರು ರಸ್ತೆಯೊಂದನ್ನು ಬಂದ್ ಮಾಡಿದ್ದರು. ಕಳೆದ 40 ದಿನಗಳ ಹಿಂದೆ ಸ್ಥಳೀಯ ಸುಮಾರು 10 ಮುಸ್ಲಿಂ ಕುಟುಂಬಗಳನ್ನು ಊರವರೇ ಒಪ್ಪಿಸಿ ಈ ನಿರ್ಧಾರಕ್ಕೆ ಬಂದಿದ್ದರು. ಜತೆಗೆ ಬ್ರಹ್ಮಕಲಶೋತ್ಸವದ ಸಮಯ ಊರಿನಲ್ಲಿ ಯಾವುದೇ ರೀತಿಯಲ್ಲೂ ಮಾಂಸಾಹಾರ ಸೇವನೆ ಮಾಡಬಾರದು ಎಂಬ ತೀರ್ಮಾನವನ್ನೂ ತೆಗೆದುಕೊಂಡಿದ್ದರು.[ಹಿಂದೂ ಮುಸ್ಲಿಂ ಸಾಮರಸ್ಯದ ತಾಳವಾಡಿ ಉತ್ಸವ]

ಆದರೆ "ಇಂದು ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಯಾಸೀನ್ ಕೋಡಿಬೇಂಗ್ರೆಯವರ ಮನೆಯಲ್ಲಿ ಅವರ ಮದುವೆ ನಿಗದಿಯಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಇಲ್ಲಿನ ರಸ್ತೆಯನ್ನು ಬ್ರಹ್ಮಕಲಶೋತ್ಸವದವರು ಬಂದ್ ಮಾಡಿದ್ದು ಅವರಿಗೆ ತಿಳಿದಿರಲಿಲ್ಲ. ಇಲ್ಲಿನ ಮನೆಯಲ್ಲಿ ಅವರು ಹೆಚ್ಚಾಗಿ ವಾಸ ಮಾಡದೇ ಇದ್ದುದರಿಂದ ಅವರಿಗೆ ಈ ಮಾಹಿತಿ ಇರಲಿಲ್ಲ.ಇಂದು ಮದುವೆ ಸಂಬಂಧ ಅವರ ಮನೆಯವರು ಮಾಂಸ ಹಿಡಿದುಕೊಂಡು ಬಂದಾಗ ಸ್ಥಳೀಯರು ಆಕ್ಷೇಪಿಸಿದ್ದಾರೆ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗಬಾರದು ಎಂದು ನಮ್ಮ ಪೊಲೀಸರು ಸ್ಥಳದಲ್ಲಿದ್ದರು. ಆದರೆ ಊರವರೇ ತಮ್ಮ ತಮ್ಮಲ್ಲಿ ಮಾತನಾಡಿಕೊಂಡು ಸಮಸ್ಯೆ ಬಗೆ ಹರಿಸಿದ್ದಾರೆ," ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ 'ಒನ್ ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಲ್ಲವೂ ಶಾಂತ ರೀತಿಯಿಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಇದೀಗ ಯಾಸೀನ್ ಕೋಡಿಬೇಂಗ್ರೆಯವರ ಮದುವೆಯನ್ನು ದೇವಸ್ಥಾನದಿಂದ 5 ಕಿಲೋಮೀಟರ್ ದೂರವಿರುವ ಮಸೀದಿಗೆ ಸ್ಥಳಾಂತರ ಮಾಡಲಾಗಿದೆ.












Click it and Unblock the Notifications