ಉಡುಪಿಯಲ್ಲಿ ಮುಂಬೈ ಹೋಟೆಲ್ ಮಾಲೀಕ ಕೊಲೆ!
ಉಡುಪಿ, ಫೆಬ್ರವರಿ 11: ನಿನ್ನೆ ಉಡುಪಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಕೊಲೆ ಮಾಡಿದ ಸ್ಥಿತಿಯಲ್ಲಿ ಸಿಕ್ಕಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ವ್ಯಕ್ತಿ ಮೂಲತಃ ಉಡುಪಿಯವರೇ ಆಗಿದ್ದು ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಗ್ರಾಮದ ಸಮೀಪ ಕುಕ್ಕೆಹಳ್ಳಿಯಲ್ಲಿ ನಿನ್ನೆ ಇವರ ಶವ ಪತ್ತೆಯಾಗಿತ್ತು. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಕೊಲೆಯಾದವರನ್ನು ಮುಂಬೈಯ ಮಾಯಾ ಹೋಟೆಲ್ ನ ಮಾಲೀಕ ವಶಿಷ್ಠ ಯಾದವ್ ಎಂದು ಗುರುತಿಸಲಾಗಿದೆ. ಹಣಕಾಸಿನ ವಿಷಯದಲ್ಲಿ ಈ ಹಿಂದೆ ಸ್ನೇಹಿತರ ನಡುವೆ ಜಗಳ ನಡೆದಿತ್ತು. ಅದೇ ವಿಚಾರದಲ್ಲಿ ಹೋಟೆಲ್ ಮಾಲೀಕನನ್ನು ಮುಂಬೈಯಿಂದ ಊರಿಗೆ ಕರೆತಂದು ಸ್ನೇಹಿತರು ಸೇರಿ ಕೊಲೆ ಮಾಡಿರುವ ಬಗ್ಗೆ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಕೊಲೆಯಾದ ಹೊಟೇಲ್ ಮಾಲೀಕ ವಶಿಷ್ಠ ಯಾದವ್ ಹಣದ ವಿಚಾರದಲ್ಲಿ ಮೋಸಗಾರ ಎನ್ನುವ ಆರೋಪ ಇತ್ತು ಎನ್ನಲಾಗಿದೆ. ಹೋಟೆಲ್ ವ್ಯವಹಾರದಲ್ಲಿ ಅಡ್ವಾನ್ಸ್ ತೆಗೆದುಕೊಂಡ ಹಣವನ್ನು ವಾಪಸು ಕೊಡುತ್ತಿರಲಿಲ್ಲ, ಅದೇ ವಿಚಾರದಲ್ಲಿ ಕೆಲವರ ಬಳಿ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ.

ಆ ವಿಚಾರಕ್ಕೆ ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಕೊಲೆ ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಣಿಪಾಲ ಕೆಎಂಸಿಯ ಶವಗಾರದಲ್ಲಿ ಪೋಸ್ಟ್ ಮಾರ್ಟಂಗಾಗಿ ಶವವನ್ನು ಇರಿಸಲಾಗಿದೆ.












Click it and Unblock the Notifications