ಉತ್ತರ ಕನ್ನಡದಲ್ಲಿ ಬಹುತೇಕ ಶಾಂತಿಯುತ ಮತದಾನ
ಉತ್ತರ ಕನ್ನಡ, ಮೇ 12 : ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಜಿಲ್ಲೆಯ 149 ಬೂತ್ ಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಅದನ್ನು ಬೆಳಗ್ಗೆ 4 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೇರಿದಂತೆ ವಿವಿಧ ಅಧಿಕಾರಿಗಳು ವೀಕ್ಷಿಸುತ್ತಿದ್ದಾರೆ.
ಕಾರವಾರದ ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯಲ್ಲಿ ಮತದಾರರು ಬೆಳಿಗ್ಗೆ 6 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಕಾದರು.
LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆ
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕಾರವಾರದ ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯ ಪಿಂಕ್ ಸಖಿ ಮತಗಟ್ಟೆಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಹಳಿಯಾಳ- 21, ಕಾರವಾರ- 26, ಕುಮಟಾ- 21, ಭಟ್ಕಳ- 26, ಶಿರಸಿ- 30, ಯಲ್ಲಾಪುರ- 26 ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
ದ. ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮತದಾನ, 1 ಗಂಟೆ ಹೊತ್ತಿಗೆ ಶೇ. 47
ಅಂದಹಾಗೆ ಯಾವ ಅಭ್ಯರ್ಥಿ, ಮುಖಂಡರು ಎಲ್ಲಿ ಮತ ಚಲಾಯಿಸಿದರು? ಮತದಾನ ಹೇಗೆ ನಡೆಯಿತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ...
ರೂಪಾಲಿ ನಾಯ್ಕ
ಕಾರವಾರ- ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ತಾಲೂಕಿನ ಚೆಂಡಿಯಾ ಮತಗಟ್ಟೆಯಲ್ಲಿ 9 ಗಂಟೆ ಸುಮಾರಿಗೆ ಮತದಾನ ಮಾಡಿದರು.
ಶಾರದಾ ನಾಯ್ಕ
ಬಿಜೆಪಿಯ ಬೆಂಗಳೂರು ನಗರ ಘಟಕದ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಾರದಾ ನಾಯ್ಕ ಅವರು ಕಾರವಾರದ ಬಿಣಗಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ದಕ್ಷಿಣ ಕನ್ನಡದಲ್ಲಿ ಕಳೆಗಟ್ಟಿದ ಮತದಾನ ಸಂಭ್ರಮ, ಗಣ್ಯರಿಂದ ಮತ ಚಲಾವಣೆ
ಜೋಮಣ್ಣ ರಾಮಾ ನಾಯ್ಕ
ಕಾರವಾರದ ಮಾಜಾಳಿಯ ಮೆಡಿಸಿಟ್ಟಾ ಶಾಲೆಯಲ್ಲಿನ ಮತಗಟ್ಟೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜೋಮಣ್ಣ ರಾಮಾ ನಾಯ್ಕ (86) ಮತ ಚಲಾಯಿಸಿದರು.
ಸವಿತಾ ಸೈಲ್
ತಮ್ಮ ಪುತ್ರನೊಂದಿಗೆ ಮತದಾನ ಮಾಡಲು ಕಾರವಾರದ ಮಾಜಾಳಿಯ ಮೆಡಿಶಿಟ್ಟಾ ಮತಗಟ್ಟೆಗೆ ಬಂದ ಸವಿತಾ ಸೈಲ್ (89)
In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ
ಭೀಮಣ್ಣ ನಾಯ್ಕ
ಶಿರಸಿಯ ಬೂತ್ ನಂಬರ್ 93ರ ನಂ. 5 ಸರ್ಕಾರಿ ಶಾಲಾ ಮತಗಟ್ಟೆಗೆ ಕುಟುಂಬ ಸಮೇತ ತೆರಳಿದ ಶಿರಸಿ- ಸಿದ್ದಾಪುರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತದಾನ ಮಾಡಿದರು.
"ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ತಪ್ಪದೇ ಮತದಾನ ಮಾಡಿ" ಎಂದು ಈ ವೇಳೆ ತಿಳಿಸಿದರು.
ಅಂಗವಿಕಲ ಯುವತಿ
ಕಾರವಾರದ ಸೇಂಟ್ ಮೈಕೆಲ್ ಕಾನ್ವೆಂಟ್ ನ ಪಿಂಕ್ ಮತಗಟ್ಟೆಯಲ್ಲಿ ಅಂಗವಿಕಲ ಯುವತಿಯೊಬ್ಬಳು ಮತ ಚಲಾಯಿಸಿದರು.
ಸೆಲ್ಫಿ ಖುಷಿಯಲ್ಲಿ...
ಸಂತೋಷ್ ಉಳ್ವೇಕರ್ ಎಂಬುವವರು ತಮ್ಮ ಪತ್ನಿಯೊಂದಿಗೆ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಿ, ಸೆಲ್ಫಿ ತೆಗೆದುಕೊಂಡರು. ಹಾಗೆಯೇ ಕಾರವಾರದ ನಗರಸಭೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ 6 ಮಂದಿ ಯುವತಿಯರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.
ಮತ ಚಲಾಯಿಸಿದರು ಹಿರಿಯರು, ಕಿರಿಯರು
ಕಾರವಾರದ ಸದಾಶಿವಗಡದ ಶಿವಾಜಿ ಕಾಲೇಜಿನ ಮತಗಟ್ಟೆಯಲ್ಲಿ ಲೀಲಾ ಕಾಶಿನಾಥ ನಾಯ್ಕ (76), ಪ್ರೇಮಾ ಶಾಂತರಾಮ ನಾಯಕ (51), ವನಿತಾ ಘನಶ್ಯಾಂ ನಾಯ್ಕ (70) ಮೂವರು ಒಟ್ಟಿಗೆ ಬಂದು ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ಮತಗಟ್ಟೆ ಇರುವ ಕಾಲೇಜಿನಲ್ಲೇ ತಾವು ಕಾಲೇಜು ವಿದ್ಯಾಭ್ಯಾಸ ಕಲಿತಿದ್ದೆವು ಎಂದು ಅವರು ಈ ವೇಳೆ ಸ್ಮರಿಸಿಕೊಂಡರು.
ಕಾರವಾರದ ಸದಾಶಿವಗಡದ ಮತಗಟ್ಟೆ ಸಂಖ್ಯೆ 31ರಲ್ಲಿ ಇಜಾನ್ ಶಹನವಾಸ್ಕಾನ್ (19), ಮಿಸ್ಬಾ (21) ಸಹೋದರ, ಸಹೋದರಿ ಹಾಗೂ ನಯೀಮ್ ಮಹಮ್ನದ್ ಸಾದಿಕ್ ಖಾನ್ (20), ವೇದಾ ಶಿರೋಡ್ಕರ್ (೨೧) ಎಂಬುವವರು ಪ್ರಥಮ ಬಾರಿಗೆ ಮತ ಚಲಾಯಿಸಿದರು.
ಯಮುನಾ ಗಾಂವಕರ
"ಮತ ಚಲಾಯಿಸುವ ಮುನ್ನ ತುಸು ಯೋಚಿಸಿ. ನಾನು ಕಾರವಾರದ ಶಿರವಾಡದಲ್ಲಿ 7 ಗಂಟೆಗೆ ಕ್ಯೂದಲ್ಲಿ ನಿಂತು ಓಟು ಮಾಡಿದೆ. ಈಗ ನಾನು ಸ್ಪರ್ಧಿಸಿರುವ ಜೋಯಿಡಾ ಹಳಿಯಾಳ ದಾಂಡೇಲಿ ಕಡೆಗೆ ಹೋಗುತ್ತಿರುವೆ. ನಿನ್ನೆ ಮೊನ್ನೆಯ ರಾತ್ರಿ ಬಂಡವಾಳಶಾಹಿ ಕೋಮುವಾದಿ ಪಕ್ಷಗಳು ನಡೆಸಿದ ಹಣದ ಚೆಲ್ಲಾಟಗಳ ಬಗ್ಗೆ ಹಲವಾರು ಫೋನ್ ಕರೆ ಬಂದವು. ಅಂಥ ಹಣ ಮತ್ತು ತೋಳ್ಬಲಗಳ ಎದುರಿಸುವ ಪ್ರಜ್ಞಾವಂತ ಚಳುವಳಿ ಕಟ್ಟುವ ಅಗತ್ಯ ಇನ್ನಷ್ಟು ಕೈಗೂಡಬೇಕಿದೆ.
ಸಿಪಿಐಎಂ ಪಕ್ಷ ಸ್ಪರ್ಧಿಸಿದ್ದರಿಂದ ತಮಗೆ ಹಿಂದೆಂದಿಗಿಂತ ಹೆಚ್ಚು ಹಣ ಹಂಚೋದು ಬಂತು ಎಂದು ನನ್ನ ಎದುರಾಳಿ ಮೂರು ಪಕ್ಷಗಳ ಸಾಮಾನ್ಯ ಮುಖಂಡರು ಅಲವತ್ತುಕೊಂಡರು. ಅಭಿವೃದ್ಧಿಗೆ ಹಣದ ಹೊಳೆಯೇ ಹರಿದು ಬಂದಿದೆ ಎಂದವರು ಮತ ಪಡೆಯಲು ಏಕೆ ಕೋಟಿ ರೂಪಾಯಿ ಚೆಲ್ಲುತ್ತಿದ್ದಾರೆ?" ಎಂದು ಹಳಿಯಾಳ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಯಮುನಾ ಗಾಂವಕರ ಮತ ಚಲಾಯಿಸಿದ ಬಳಿಕ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಸತೀಶ್ ಸೈಲ್
ಕಾರವಾರ ತಾಲೂಕು ಮಾಜಾಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 12 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಸತೀಶ್ ಸೈಲ್ ಮತದಾನ ಮಾಡಿದರು.
ನಾನು ಪ್ರತಿಯೊಂದು ಕಾರ್ಯವನ್ನು ಹಿಂದೂ ಧರ್ಮದ ನಂಬಿಕೆಯಂತೆ ಮಾಡುತ್ತೇನೆ. ನಾಮಪತ್ರ ಸಲ್ಲಿಸುವ ವೇಳೆಯೂ ಒಳ್ಳೆಯ ಕಾಲ ನೋಡಿಯೇ ಸಲ್ಲಿಸಿದ್ದೆ. ಇಂದು ಕೂಡ ರಾಹುಕಾಲ ಮುಗಿದ ಬಳಿಕ ಪತ್ನಿ ಹಾಗೂ ತಾಯಿಯ ಸಮೇತ ಮತದಾನ ಮಾಡಿದ್ದೇನೆ ಎಂದು ಕಾರವಾರ ಅಂಕೋಲಾ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಕಾರವಾರದ ಮೀನುಗಾರಿಕಾ ಉಪನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ಪತ್ನಿ ಪೂಜಿತಾ ನಕುಲ್ ಅವರೊಂದಿಗೆ ಮತದಾನ ಮಾಡಿದರು.
ಶಿವರಾಮ್ ಹೆಬ್ಬಾರ
ಯಲ್ಲಾಪುರದ ಅರಬೈಲ್ ಮತಗಟ್ಟೆಯಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಅವರು ಮತ ಚಲಾಯಿಸಿದರು.
ಆರ್.ವಿ. ದೇಶಪಾಂಡೆ
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ನ ಹಳಿಯಾಳ ಕ್ಷೇತ್ರದ ಅಭ್ಯರ್ಥಿ ಆರ್.ವಿ.ದೇಶಪಾಂಡೆ ತಮ್ಮ ಕುಟುಂಬದವರಂದಿಗೆ ಬಂದು ಹಳಿಯಾಳದಲ್ಲಿ ಮತ ಚಲಾಯಿಸಿದರು. ಈ ವೇಳೆ ಪತ್ನಿ ರಾಧಾ ದೇಶಪಾಂಡೆ, ಮಕ್ಕಳಾದ ಪ್ರಶಾಂತ್ ದೇಶಪಾಂಡೆ ಹಾಗೂ ಪ್ರಸಾದ್ ದೇಶಪಾಂಡೆ ಜತೆಗೆ ಇಬ್ಬರು ಸೊಸೆಯರು ಇದ್ದರು.
ಅನಂತಕುಮಾರ ಹೆಗಡೆ
ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆಯವರು ಪತ್ನಿಯೊಂದಿಗೆ ಶಿರಸಿಯಲ್ಲಿ ಮತ ಚಲಾಯಿಸಿದರು.