ಕಡಲ ಮೀನುಗಾರಿಕೆ, ಕರಾವಳಿಗರ ಕನವರಿಕೆ
ಉಡುಪಿ, ಜುಲೈ 23 : ಕರಾವಳಿ ಕರ್ನಾಟಕದಲ್ಲಿ ನದಿ, ಕಡಲ ಮೀನುಗಾರಿಕೆ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಖಾತೆ ಸಚಿವರಾಗಿ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್ ಮಧ್ವರಾಜ್ ಮೇಲೆ ಮೀನುಗಾರ ಸಮುದಾಯ ಅಪಾರ ಭರವಸೆಯಿಟ್ಟಿದೆ.
ಈವರೆಗೆ ರಾಜ್ಯ ಸಚಿವ ಸಂಪುಟದಲ್ಲಿ ಮೀನುಗಾರಿಕೆ ಖಾತೆಗೆ ಕರಾವಳಿಯ ಮೀನುಗಾರಿಕಾ ಸಮುದಾಯದ ಜನಪ್ರತಿನಿಧಿಗೆ ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಶಾಸಕರಾಗಿರುವ ಪ್ರಮೋದ್ ಮಧ್ವರಾಜ್ಗೆ ಈ ಮಹತ್ವದ ಸ್ಥಾನಮಾನ ದಕ್ಕಿದೆ.[ಮೀನು ದಿನಾಚರಣೆಯಲ್ಲಿ ಹರಿದು ಬಂದ ಮಾಹಿತಿ ಸಾಗರ]

ಮೀನುಗಾರಿಕೆ ವಲಯದ ಆಗುಹೋಗುಗಳು, ಸಂಕಷ್ಟಗಳು, ನೋವುಗಳನ್ನು ಹತ್ತಿರದಿಂದ ಬಲ್ಲ ಪ್ರಮೋದ್ ಅವರ ಮೇಲೆ ಸಹಜವಾಗಿಯೇ ನಿರೀಕ್ಷೆಗಳ ಭಾರ ದೊಡ್ಡದಾಗಿದೆ. ಇನ್ನುಳಿದ ಎರಡು ವರ್ಷಗಳಲ್ಲಿ ಲಾಭದಾಯಕ ಮೀನುಗಾರಿಕೆ, ಮತ್ಸ್ಯ ಸಂಪತ್ತು ಉಳಿಸಿ, ಬೆಳೆಸಲು ಕೊಡುಗೆ ನೀಡುವ ಅವಕಾಶವೂ ಅವರದ್ದಾಗಿದೆ.[ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ]
ಈ ಹಿನ್ನಲೆಯಲ್ಲಿ ದೇಶದ 9ರಾಜ್ಯಗಳ ಮೀನುಗಾರಿಕಾ ಸಚಿವರ ಸಮಾವೇಶವನ್ನು ಬೆಂಗಳೂರಿನಲ್ಲಿ ಶೀಘ್ರವೇ ಆಯೋಜಿಸಿ ಸಮಗ್ರ ಯೋಜನೆ ರೂಪಿಸುವ ಭರವಸೆ ನೀಡಿದ್ದಾರೆ ಸಚಿವರು.[ಲಾಲಾರಸ ಸ್ರವಿಸುವಂತೆ ಮಾಡುವ 'ಮೀನು ಗಮ್ಮತ್ ಥಾಲಿ'!]
ಸಮಸ್ಯೆ, ಪರಿಹಾರಗಳೇನು? : ಕರಾವಳಿ ಕರ್ನಾಟಕದಲ್ಲಿ 12 ಪ್ರಮುಖ ಬಂದರುಗಳಿದ್ದು ಮಂಗಳೂರು ಹಾಗೂ ಮಲ್ಪೆಯ ಹೊರತು ಉಳಿದ ಬಂದರುಗಳನ್ನು ಅಳಿವೆ ಬಾಗಿಲ ಮೂಲಕ ದೋಣಿಗಳು ಸಂಚರಿಸದಂತಹ ಪರಿಸ್ಥಿತಿ ಇದೆ. ಅವೆಲ್ಲ ಮರಳು, ಹೂಳಿನಿಂದ ತುಂಬಿಕೊಂಡಿವೆ . [ಮಂಗಳೂರಿಗೆ ಬರುತ್ತಿದೆ ಚೆನ್ನೈ, ಆಂಧ್ರದ ಮೀನು!]

ಕೇರಳ ಮಾದರಿಯಲ್ಲಿ ಬ್ರೇಕ್ ವಾಟರ್ ಚಾನಲ್ ನಿರ್ಮಾಣವಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಚಿವರ ಗಮನ ಸೆಳೆಯಬೇಕಿದೆ. ಮೀನುಗಾರಿಕಾ ಇಲಾಖೆ ಮೂಲಕ ಸಮೀಕ್ಷೆ ನಡೆಸಿ , ಮೀನುಗಾರಿಕಾ ಸಮಗ್ರ ನೀತಿ ರೂಪಿಸಬೇಕಿದೆ. ಪಶ್ಚಿಮ ಕರಾವಳಿಯ ಗುಜರಾತ್ನಿಂದ ಕೇರಳ ತನಕ ಏಕನೀತಿ ಜತೆಗೆ ಮೀನುಗಾರಿಕೆ, ಮತ್ಸ್ಯ ಸಂಪತ್ತು ಉಳಿಸಿ ಬೆಳೆಸುವ ನೀತಿ, ಮುತುವರ್ಜಿ ಮುಂದಿನ ಮೀನುಗಾರಿಕಾ ಪೀಳಿಗೆ ಉಳಿಸಬೇಕಿದೆ.
ಮೀನುಗಾರಿಕೆಗೆ ಹೊರ ಜಿಲ್ಲೆ ರಾಜ್ಯದವರು, ಮೀನುಗಾರರಲ್ಲದವರು ಬರುತ್ತಿದ್ದು ಪೂರಕವಾಗಿ ದೋಣಿ, ಡೀಸೆಲ್ , ಸಹಾಯಧನ ಸಹಿತ ನಾನಾ ಸವಲತ್ತುಗಳನ್ನು ಒದಗಿಸಬೇಕು. ಪ್ರಸ್ತುತ ಹಣ ಮತ್ತು ಉಮೇದು ಇದ್ದವರಿಗೆ ಮಾತ್ರ ಮೀನುಗಾರಿಕೆ ಸೀಮಿತವಾಗಿದ್ದು ಮೀನುಗಾರಿಕಾ ಮುಖಂಡರು, ಸಚಿವರು, ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೆಡೆ ಸೇರಿ ಚರ್ಚಿಸಿ ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು.
ಕೇಂದ್ರ ಸರಕಾರದಿಂದ ಮೀನುಗಾರಿಕಾ ದೋಣಿಗಳು ಬಳಸುವ ಪ್ರತಿ ಲೀಟರ್ ಡೀಸೆಲ್ಗೆ ಸಿಗುತ್ತಿದ್ದ 1.50 ರೂ. ತೆರಿಗೆ ರಿಯಾಯಿತಿ ಬದಲಾದ ನೀತಿಯಿಂದಾಗಿ ಬಿಪಿಎಲ್ ಕುಟುಂಬಕ್ಕೆ ಸೀಮಿತವಾಗಿದೆ. ದೋಣಿಗಳಲ್ಲಿ ದುಡಿಯುವವರಿಗೆ, ಕಾರ್ಮಿಕರಿಗೆ, ಮೀನುಗಾರಿಕೆಗೆ ಇದರ ಲಾಭ ಸಿಗುತ್ತಿಲ್ಲ.












Click it and Unblock the Notifications